Publish Date: Tue, 23 May 2023 (13:25 IST)
Updated Date: Tue, 23 May 2023 (13:22 IST)
ಇಂಫಾಲ : ಮೈಟೀಸ್ ಮತ್ತು ಕುಕಿ ಜನಾಂಗದ ನಡುವೆ ಸೋಮವಾರ ನಡೆದ ಘರ್ಷಣೆಯಿಂದಾಗಿ ಮಣಿಪುರದ ರಾಜಧಾನಿ ಇಂಫಾಲನಲ್ಲಿ ಮತ್ತೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಲ್ಲದೆ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘರ್ಷಣೆ ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು ಮೇ 26 ರ ವರೆಗೆ ರಾಜ್ಯದಲ್ಲಿ ಇಂಟರ್ನೆಟ್ ಸ್ಥಗಿತ ಗೊಳಿಸಲಾಗಿದೆ. ಅಲ್ಲದೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಕರ್ಫ್ಯೂ ಬಿಗಿಗೊಳಿಸಲಾಗಿದೆ. 2 ರಿಂದ 6 ರ ವರೆಗೆ ಕರ್ಫ್ಯೂ ಸಡಿಲಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಪ್ರತಿಕ್ರಿಯಿಸಿ, ಎರಡು ಸಮುದಾಯಗಳ ನಡುವಿನ ಉದ್ವಿಗ್ನತೆಯ ಬಗ್ಗೆ ವರದಿಗಳು ಬರುತ್ತಲೇ ಇದೆ. ಮೈಟೈಸ್ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು. ಇದಾದ ಬಳಿಕ ಪ್ರತಿಭಟನೆ ವ್ಯಾಪಾಕವಾಗಿ ಹಬ್ಬಿತ್ತು. ಈಗ ಪ್ರಸ್ತುತ ಆ ವಿಚಾರವಾಗಿ ಘರ್ಷಣೆ ನಡೆಯುತ್ತಿಲ್ಲ. ಅಲ್ಲದೆ ಇಂದಿನ ಪ್ರತಿಭಟನೆಯ ಎರಡು ಗುಂಪಿನ ನಡುವೆ ಯಾವುದೇ ದ್ವೇಷವಿಲ್ಲ. ಅರಣ್ಯ ಸಂರಕ್ಷಣೆ ಮತ್ತು ಗಸಗಸೆ ತೆರವುಗೊಳಿಸುವ ಸರ್ಕಾರದ ನೀತಿಗೆ ಪ್ರತಿರೋಧವಾಗಿ ಪ್ರತಿಭಟನೆ ನಡೆದಿದೆ ಎಂದಿದ್ದಾರೆ.