Publish Date: Thu, 05 May 2022 (18:06 IST)
Updated Date: Thu, 05 May 2022 (18:13 IST)
ಜನರಲ್ ಪವರ್ ಆಫ್ ಅಟಾರ್ನಿ(GPA)ಯನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಚಿತ್ರದುರ್ಗ ಜಿಲ್ಲೆ ಹೊಳಲ್ಕರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಹಾಗೂ ಕುಟುಂಬಸ್ಥರ ವಿರುದ್ದ ದೂರು ದಾಖಲಾಗಿದೆ.
ಎಂ.ಜಿ.ಶ್ರೀಧರ್ ಎಂಬುವವರು ನಾಗರಾಜ್ ಎಂಬುವವರಿಗೆ ವ್ಯವಹಾರದ ಉದ್ದೇಶದ ಸಲುವಾಗಿ 2016ರಲ್ಲಿ GPA ಮೂಲಕ ಅಧಿಕಾರವನ್ನು ಹಸ್ತಾಂತರ ಮಾಡಿದ್ದರು. ಇದಕ್ಕೊಪ್ಪದ ಶ್ರೀಧರ್ ಸಹೋದರಿ ತಮ್ಮಗು ಆಸ್ತಿಯಲ್ಲಿ ಪಾಲಿದೆ ಎಂದು ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ವಿಚಾರಣೆ ನಡೆಯುವ ಸಮಯದಲ್ಲಿ ಶ್ರೀಧರ್ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಶ್ರೀಧರ್ ಸಾವನ್ನು ದುರುಪಯೋಗ ಪಡಿಸಿಕೊಂಡ ನಾಗರಾಜ್ ಶಾಸಕರ ಕುಟುಂಬದ ಸದಸ್ಯರಿಗೆ ಆಸ್ತಿ ಕ್ರಯಪತ್ರ ಮಾಡಿಸಿಕೊಟ್ಟಿದ್ದಾರೆ. ಈ ಕುರಿತು ಖಾಸಗಿ ದೂರು ದಾಖಲಾದ ಹಿನ್ನೆಲೆಯಲ್ಲಿ ಹೊಳಲ್ಕರೆ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯ IPC ಸೆಕ್ಷನ್ 149, 404, 405, 415, 420,423, 463, 464, 466, 468, 470 ಅಡಿ ಪ್ರಕರಣವನ್ನ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದೆ.
ಅಧಿಕಾರ ದುರುಪಯೋಗ ಆರೋಪದ ಮೇಲೆ ಶಾಸಕ ಎಂ.ಚಂದ್ರಪ್ಪ, ಪತ್ನಿ ಚಂದ್ರಕಲಾ, ಪುತ್ರರಾದ ರಘುಚಂದನ್, ದೀಪ್ ಚಂದನ್, ಉಪನೋಂದಣಾಧಿಕಾರಿ ನಾಗರತ್ನಮ್ಮ ಸೇರಿದಂತೆ ಇತರರ ವಿರುದ್ದ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.