Publish Date: Sun, 07 May 2023 (14:30 IST)
Updated Date: Sun, 07 May 2023 (16:10 IST)
ಸೆಲ್ಫ್ ಕಿಡ್ನಾಪ್ ನಾಟಕವಾಡಿದ್ದರು ಎನ್ನಲಾಗಿದ್ದ ಯಲಹಂಕ ಜೆಡಿಎಸ್ ಮುಖಂಡ ಮುನೇಗೌಡರ ಮೇಲೆ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ. ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಮೇಲೆ ಲಕ್ಷಾಂತರ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದ್ದು, ಭಾರಿ ವಾಹನಗಳನ್ನು ಮುನೇಗೌಡ ಬಾಡಿಗೆಗೆ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. ಲಾಜಿಸ್ಟಿಕ್ಸ್ ಸರ್ವೀಸ್ ನಡೆಸುತ್ತಿರುವ ಜೆಡಿಎಸ್ ಅಭ್ಯರ್ಥಿ ಮುನೇಗೌಡ, ಆನೇಕಲ್ ಮಂಜುನಾಥರ ಸುಮುಖ ಎಂಟರ್ ಪ್ರೈಸಸ್ ಮೂಲಕ ಭಾರಿ ವಾಹನ ಬಾಡಿಗೆ ಪಡೆದಿದ್ದರು. ಮುನೇಗೌಡರ SVC ರೋಡ್ ಲೈನ್ಸ್ ಸಂಸ್ಥೆಗೆ ಭಾರಿ ವಾಹನ ಗುತ್ತಿಗೆಗೆ ನೀಡಲಾಗಿತ್ತು. ಈ ಹಿನ್ನೆಲೆಯೆಲ್ಲಿ 2020 ಡಿಸೆಂಬರ್ನಿಂದ 2021ರವರೆಗೆ ಮಂಜುನಾಥ್ ಭಾರಿ ವಾಹನಗಳನ್ನು ಬಾಡಿಗೆಗೆ ಕಳುಹಿಸಿದ್ದರು ಎನ್ನಲಾಗಿದೆ. ಬಾಡಿಗೆಗೆ ಎಂದು ನೀಡಿದ್ದ ವಾಹನಕ್ಕೆ ಮಾಲೀಕ ಮಂಜುನಾಥ್, ಚಾಲಕರ ಸಂಬಳ, ಡೀಸೆಲ್ ಹಾಕಿಸಿ ವ್ಯವಹಾರ ನಡೆಸಿದ್ದರು. ಆದರೆ ವ್ಯವಹಾರದ 69 ಲಕ್ಷ ಬಾಕಿ ಹಣ ಕೊಡದೇ ಮುನೇಗೌಡ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನೊಂದ ಮಂಜುನಾಥ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.