Publish Date: Tue, 21 Jun 2022 (13:01 IST)
Updated Date: Tue, 21 Jun 2022 (13:04 IST)
ಉಡುಪಿ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದ ಎಲ್ಲೆಡೆ ಸಾಮೂಹಿಕವಾಗಿ ಯೋಗಾಸನ ಮಾಡುವ ಮೂಲಕ ಆಚರಿಸಲಾಗುತ್ತಿದೆ.
ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುಂಬೈ ಪ್ರವಾಸದಲ್ಲಿದ್ದು, ಮಠದಲ್ಲೇ ಯೋಗಾಭ್ಯಾಸ ಮಾಡಿದರು.
ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುಂಬೈ ಪ್ರವಾಸ ಕೈಗೊಂಡಿದ್ದು, ಹಲವಾರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಠದ ಶಿಷ್ಯರ ಜೊತೆ ಬೆಳಗ್ಗೆ ಯೋಗಾಭ್ಯಾಸವನ್ನು ಮಾಡಿದರು. ಪ್ರತಿದಿನ ಪೇಜಾವರ ಶ್ರೀಗಳು ಯೋಗಾಭ್ಯಾಸವನ್ನು ಮಾಡಿ ದೇಹವನ್ನು ಸದೃಢವಾಗಿ ಇಟ್ಟುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, ಯೋಗ ಪ್ರಾಚೀನ ಕಾಲದ ಋಷಿ ಮುನಿಗಳಿಂದ ಮಾನವ ಜನಾಂಗಕ್ಕೆ ಸಿಕ್ಕಿರುವ ಹಲವಾರು ಕೊಡುಗೆಗಳಲ್ಲೊಂದು. ಪ್ರಕೃತಿಯ ನಡುವೆ ಸಂಪರ್ಕದಲ್ಲಿದ್ದ ಋಷಿಮುನಿಗಳಿಗೆ ಯೋಗದ ಅಗತ್ಯ ಇರಲಿಲ್ಲ.
ಇಂದು ಮಾನವಕುಲ ಪ್ರಕೃತಿಯಿಂದ ದೂರವಾಗಿರುವ ಹೊತ್ತಿನಲ್ಲಿ ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕೆ ಯೋಗ ಅತ್ಯಗತ್ಯ. ಅಂತಹ ಯೋಗವನ್ನು ನಾವು ನಮ್ಮ ಜೀವನದಲ್ಲಿ ನಿತ್ಯ ರೂಪಿಸಿಕೊಳ್ಳೋಣ ಎಂದು ಹೇಳಿದರು.