Publish Date: Thu, 07 Dec 2017 (18:14 IST)
Updated Date: Thu, 07 Dec 2017 (18:15 IST)
ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಿನ್ನಮತ ಮತ್ತೆ ಪ್ರತಿಧ್ವನಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇರಿಸು ಮುರಿಸು ಅನುಭವಿಸಿದರು.
ಶಾಸಕ ಪ್ರಭು ಚೌಹಾಣ್ ಮತ್ತು ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸೋತಿದ್ದ ಧಾನಾಜಿ ಜಾಧವ್ ಅವರೊಳಗಿನ ಭಿನ್ನಮತ ಸ್ಫೋಟಗೊಂಡು ಬಹಿರಂಗವಾಗಿ ವಾಗ್ವಾದ ನಡೆದು ತೀವ್ರ ಉದ್ವಿಗ್ನ ಸ್ಥಿತಿಗೆ ಕಾರಣವಾಯಿತು.
ಯಡಿಯೂರಪ್ಪ ಅವರು ವೇದಿಕೆಯಲ್ಲಿದ್ದಾಗಲೇ ಪರಸ್ಪರ ಧಿಕ್ಕಾರಗಳನ್ನು ಕೂಗಲಾಯಿತು. ಧಾನಾಜಿ ಅವರ ನೂರಾರು ಬೆಂಬಲಿಗರು ಆಗಮಿಸಿ ಶಾಸಕ ಚೌಹಾಣ್ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಸಮಾರಂಭ ಗೊಂದಲದ ಗೂಡಾಯಿತು.
ಯಡಿಯೂರಪ್ಪ ಅವರು ವೇದಿಕೆಯಲ್ಲಿದ್ದಾಗಲೇ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಪಕ್ಷದಿಂದಲೆ ಹೊರ ಹಾಕುವುದಾಗಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಸಂಸದ ಭಗವಂತ್ ಖೂಬಾ ಅವರನ್ನು ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.