Publish Date: Thu, 28 Sep 2017 (12:41 IST)
Updated Date: Thu, 28 Sep 2017 (12:45 IST)
ಮೈಸೂರು: ನವರಾತ್ರಿಯ 7ನೇ ದಿನವಾದ ನಿನ್ನೆ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಮೈಸೂರು ಮಹಾ ಸಂಸ್ಥಾನದ ವಿದ್ಯಾದೇವಿ ಸರಸ್ವತಿಗೆ ಅಗ್ರ ಪೂಜೆ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿಗೆ ಪೂಜೆ ಸಲ್ಲಿಸಿದರು.
ಆಯುಧ ಪೂಜೆಗೂ ಮುನ್ನವೇ ಮೈಸೂರು ಅಂಬಾವಿಲಾಸ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಮಹಾರಾಜರಿಂದ ಸರಸ್ವತಿ ಪೂಜೆ ನೆರವೇರುತ್ತೆ. ಈ ವೇಳೆ ಶ್ರೀ ದುರ್ಗೆ, ವಾಗ್ದೇವಿ, ವೀಣಾಪಾಣಿ, ಪುಸ್ತಕ ದಾರಿ, ಮಹಾಲಕ್ಷ್ಮಿ, ಮಹಾ ಸರಸ್ವತಿಯ ಅಗ್ರಪೂಜೆ ನವರಾತ್ರಿಯಲ್ಲಿ ಮಹಾರಾಜರು ನೆರವೇರಿಸುವುದು ವಿಶೇಷ.
ಸರಸ್ವತಿ ಪೂಜಾ ಕೈಂಕರ್ಯದಲ್ಲಿ ಮೈಸೂರು ಅರಸರ ಕುಲದೇವತೆ ಚಾಮುಂಡೇಶ್ವರಿ ದೇವಿ, ವಿಘ್ನ ನಿವಾರಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸರಸ್ವತಿ ಪೂಜೆ ಅಂಗವಾಗಿ ಸರಸ್ವತಿಯ ಭಾವಚಿತ್ರದ ಜತೆಗೆ ಅರಮನೆಯಲ್ಲಿರುವ ವೀಣೆಗಳು, ಪುರಾತನ ಕಾಲದ ಗ್ರಂಥ, ಹಸ್ತಪ್ರತಿಗಳಿಗೆ ಯದುವೀರ್ ಒಡೆಯರ್ ಅವರು ಪೂಜೆ ಸಲ್ಲಿಸಿದರು. ಬಳಿಕ, ಅಲಪೀಠ ಪೂಜೆ, ದ್ವಾರಪಾಲಕ ಪೂಜೆ, ಮಂಟಪ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಈ ವೇಳೆ ರಾಜಪುರೋಹಿತರು, ಅರಮನೆ ಪಂಡಿತರು ವೇದ, ಮಂತ್ರಘೋಷ ಹೇಳುವ ಮೂಲಕ ಶಾರದಾಂಬೆಯನ್ನು ಸ್ತುತಿಸಿದರು.