Publish Date: Tue, 07 Jun 2022 (09:00 IST)
Updated Date: Tue, 07 Jun 2022 (09:07 IST)
ಚಿಕ್ಕಬಳ್ಳಾಪುರ: ಪತಿಯ ಹತ್ಯೆಗೆ ಸುಪಾರಿ ಕೊಟ್ಟು ಬಳಿಕ ಪತಿಯ ಜೊತೆಗೇ ಪೊಲೀಸ್ ಠಾಣೆಗೆ ಬಂದು ದೂರು ಕೊಡುವ ನಾಟಕವಾಡಿ ಪತ್ನಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಕಚೇರಿಗೆ ಸಹೋದ್ಯೋಗಿಗಳೊಂದಿಗೆ ಕಾರಿನಲ್ಲಿ ಹೋಗುವಾಗ ಅಡ್ಡಗಟ್ಟಿದ್ದ ಆರೋಪಿಗಳು ದಾಳಿ ನಡೆಸಿ ಹತ್ಯೆಗೆ ಪ್ರಯತ್ನಿಸಿದ್ದರು. ಆದರೆ ಕಾರಿನ ಡೋರ್ ಲಾಕ್ ಆಗಿದ್ದರಿಂದ ಕೇವಲ ಗಾಜು ಒಡೆದಿತ್ತಷ್ಟೇ. ದುಷ್ಕೃತ್ಯಕ್ಕೆ ಮುಂದಾಗುವ ಮೊದಲೇ ಸ್ಥಳೀಯರು ಬಂದಿದ್ದರಿಂದ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಸಂಬಂಧ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ವಿಚಾರಣೆ ನಡೆಸಿ ಓರ್ವನನ್ನು ಬಂಧಿಸಿದ್ದರು. ಅದರಂತೆ ವಿಚಾರಣೆ ನಡೆಸಿದಾಗ ಪತ್ನಿಯೇ ಪತಿಯನ್ನು ಕೊಲ್ಲಲು 40 ಲಕ್ಷ ರೂ.ಗೆ ಸುಪಾರಿ ಕೊಟ್ಟ ವಿಚಾರ ಬೆಳಕಿಗೆ ಬಂದಿತ್ತು. ಪತ್ನಿ ಚೀಟಿ ಹಣದಿಂದ ನಷ್ಟ ಅನುಭವಿಸಿದ್ದಳು. ಅದನ್ನು ತುಂಬಿಕೊಡಲು ಗಂಡನ ಆಸ್ತಿಯ ಮೇಲೆ ಆಕೆಯ ಕಣ್ಣು ಬಿದ್ದಿತ್ತು. ಇದಕ್ಕಾಗಿ ಆತನನ್ನು ಕೊಲೆ ಮಾಡಿ ಆಸ್ತಿ ಹೊಡೆಯುವ ಯೋಜನೆ ಹಾಕಿದ್ದಳು. ಅದೀಗ ವಿಫಲವಾಗಿ ಜೈಲು ಕಂಬಿ ಎಣಿಸುವಂತಾಗಿದೆ.