Publish Date: Wed, 12 Feb 2025 (11:05 IST)
Updated Date: Wed, 12 Feb 2025 (11:06 IST)
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಹಣ ಕಳೆದ ಎರಡು-ಮೂರು ತಿಂಗಳಿನಿಂದ ಜಮೆ ಆಗುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿದೆ.
ಕಾಂಗ್ರೆಸ್ ನ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಂತೆ ಕುಟುಂಬದ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2,000 ರೂ. ಜಮೆ ಮಾಡಬೇಕು. ಆದರೆ ಕಳೆದ ಎರಡು ಮೂರು ತಿಂಗಳಿಂದ ಹಣವೇ ಬಂದಿಲ್ಲ. ಇದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅವರು ತಾಂತ್ರಿಕ ಕಾರಣಗಳನ್ನು ಮುಂದಿಡುತ್ತಾರೆ. ಗೃಹಲಕ್ಷ್ಮಿ ಹಣ ಜಮೆ ವಿಚಾರದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಅದಕ್ಕೇ ನಿಧಾನವಾಗುತ್ತಿದೆ ಎಂದು ಕಾರಣ ನೀಡಲಾಗಿದೆ.
ಹೊಸ ನಿಯಮದ ಪ್ರಕಾರ ರಾಜ್ಯ ಕಾರ್ಯದರ್ಶಿಯಿಂದ ತಾಲ್ಲೂಕು ಪಂಚಾಯಿತಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಬಳಿಕ ತಾಲೂಕು ಪಂಚಾಯಿತಿಯಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಈ ಬದಲಾವಣೆ ಕಾರಣದಿಂದ ಹಣ ಜಮೆ ಮಾಡಲು ಕೊಚ ವಿಳಂಬವಾಗುತ್ತಿದೆ. ಆದರೆ ಶೀಘ್ರದಲ್ಲೇ ಎಲ್ಲಾ ಬಾಕಿ ಕಂತುಗಳ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.