ಕಲಬುರಗಿ: ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಹಾಗೂ ಆರ್ಎಸ್ಎಸ್, ಧರ್ಮಸ್ಥಳ ಚಲೋ, ಮದ್ದೂರು ಚಲೋ ನಡೆಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಮಾಡಿದರು.
ನಗರದಲ್ಲಿ ಪತ್ರಕರ್ತರ ಜತೆ ಬಿಜೆಪಿ ನಿಯೋಗದಿಂದ ಮದ್ದೂರು ಚಲೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಅಮಾಯಕರು, ಬಡವರನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳು, ಚಲೋಗಳನ್ನು ನಡೆಸುತ್ತಾರೆ. ಅದರ ಬದಲು ವಿದೇಶದಲ್ಲಿರುವ, ಉದ್ಯೋಗ ಮಾಡುತ್ತಿರುವ ತಮ್ಮ ಮಕ್ಕಳನ್ನು ಕರೆಯಿಸಿ, ಮದ್ದೂರು ಚಲೋ ನಡೆಸಲಿ ಎಂದು ಸವಾಲೆಸೆದರು.
ಧರ್ಮಸ್ಥಳ ಚಲೋದಲ್ಲಿ ಬಿಜೆಪಿ ನಾಯಕರ ಮಕ್ಕಳು ಯಾಕೆ ಪಾಲ್ಗೊಳ್ಳುವುದಿಲ್ಲ. ನಿಮ್ಮ ಮಕ್ಕಳು ಯಾಕೆ ಕೇಸರಿ ಶಾಲು ಹಾಕಿಕೊಂಡು ಮದ್ದೂರು ಚಲೋದಲ್ಲಿ ಪಾಲ್ಗೊಳ್ಳುತ್ತಿಲ್ಲ. ಬರೀ ಬಡವರ ಮಕ್ಕಳೇ ಆಗಬೇಕಾ? ನಿಮ್ಮ ಮಕ್ಕಳು ವಿದೇಶದಲ್ಲಿ ಓದಬೇಕು, ಬ್ಯುಸಿನೆಸ್ ಮಾಡಬೇಕಾ? ಅವರನ್ನೆಲ್ಲ ಧರ್ಮ ರಕ್ಷಣೆ, ಗೋರಕ್ಷಣೆಗಾಗಿ ಯಾಕೆ ಆರ್ಎಸ್ಎಸ್ ಶಾಖೆಗಳಿಗೆ ಕಳುಹಿಸುತ್ತಿಲ್ಲ? ಬಡವರು, ದಲಿತರು, ಅಮಾಯಕರನ್ನು ಪ್ರಚೋದಿಸಿ ಪ್ರತಿಭಟನೆ ಬಳಸುವ ಬದಲು, ನಿಮ್ಮ ಮಕ್ಕಳನ್ನು ಪ್ರತಿಭಟನೆ ನಡೆಸಲು ಬೀದಿಗಿಳಿಸಿ ನೋಡೋಣ ಎಂದು ಆಕ್ರೋಶ ಹೊರಹಾಕಿದರು.