ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ವಿರುದ್ಧ ಸಿಐಡಿ ತನಿಖೆಯನ್ನು ಹಿಂಪಡೆದ ಬಗ್ಗೆ ಗೃಹಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ನಟಿ ರನ್ಯಾ ರಾವ್ ರನ್ನು ಬಂಧಿಸಲಾಗಿತ್ತು. ಆಕೆಯ ವಿಚಾರಣೆ ನಡೆಸಿದ ಡಿಆರ್ ಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಹಲವು ದೊಡ್ಡ ದೊಡ್ಡವರ ಜೊತೆಗೆ ರನ್ಯಾ ಲಿಂಕ್ ಇರುವ ವಿಚಾರ ಬಯಲಾಗುತ್ತಿದೆ.
ಪ್ರಕರಣದ ತನಿಖೆಗೆ ಆದೇಶಿಸಿದ್ದ ರಾಜ್ಯ ಸರ್ಕಾರ ಈಗ ಆದೇಶ ಹಿಂಪಡೆದಿದೆ. ರಾಜಕಾರಣಿಗಳ ಜೊತೆ ರನ್ಯಾ ಲಿಂಕ್ ಸುದ್ದಿಯ ಬೆನ್ನಲ್ಲೇ ರಾಜ್ಯ ಸರ್ಕಾರ ತನಿಖೆ ಹಿಂಪಡೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಇದೀಗ ಗೃಹಸಚಿವ ಜಿ ಪರಮೇಶ್ವರ್ ಸಮಜಾಯಿಷಿ ನೀಡಿದ್ದಾರೆ.
ನೋಡಿ, ನಾನು ತಕ್ಷಣವೇ ಸಿಐಡಿ ತನಿಖೆಗೆ ಆದೇಶ ಮಾಡಿದ್ದೆ. ಪ್ರೋಟೋಕಾಲ್ ಉಲ್ಲಂಘನೆಯಾಗಿದೆಯಾ ಎಂದು ತನಿಖೆಗೆ ಆದೇಶಿಸಿದ್ದೆ. ಆದರೆ ಅಷ್ಟರವರೆಗೆ ಸಿಎಂ ಕಚೇರಿಯಿಂದ ಡಿಪಿಆರ್ ಗೆ ಇನ್ ಸ್ಟ್ರಕ್ಷನ್ ಹೋಗಿತ್ತು. ಡಿಪಿಆರ್ ಒಬ್ಬ ಐಪಿಎಸ್ ಆಫೀಸರ್. ನಮ್ಮ ಆಫೀಸಿಂದ ಮಾಡುವುದು ಬೇಡ, ಡಿಪಿಆರ್ ಮಾಡಲಿ ಎಂದು ಸೂಚನೆಯಿತ್ತು. ಒಂದೇ ವಿಚಾರದ ಬಗ್ಗೆ ಇಬ್ಬರೂ ತನಿಖೆ ಮಾಡುವುದು ಬೇಡ ಎಂದು ಸಿಐಡಿ ತನಿಖೆ ಹಿಂಪಡೆದೆವು ಎಂದು ಪರಮೇಶ್ವರ್ ಹೇಳಿದ್ದಾರೆ.