Publish Date: Thu, 25 Apr 2019 (15:47 IST)
Updated Date: Thu, 25 Apr 2019 (15:48 IST)
ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ತಿಳಿಸಿದೆ. ನಾಳೆ ದೆಹಲಿಯಲ್ಲಿ ಪಕ್ಷದ ವರಿಷ್ಠರು ಹೆಸರು ಫೈನಲ್ ಮಾಡಲಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದು, ಕೋರ್ ಕಮಿಟಿ ಸಭೆಯಲ್ಲಿ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ಆಗಿದೆ. 22 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತವಾಗಿದೆ. ಒಂದು ಸ್ಥಾನ ಜಾಸ್ತಿಯಾಗಬಹುದೇ ಹೊರತು ಕಡಿಮೆ ಆಗುವುದಿಲ್ಲ ಎಂದರು.
ಉಪಚುನಾವಣೆಯ ಹಿನ್ನೆಲೆಯಲ್ಲಿ ಆಕಾಂಕ್ಷಿಗಳೆಲ್ಲರನ್ನೂ ಕರೆಸಿ ಮನವೊಲಿಸಿ ಹೈಕಮಾಂಡ್ ಗೆ ಒಂದೊಂದೇ ಹೆಸರು ಶಿಫಾರಸು ಮಾಡಿದ್ದೇವೆ. ನಾಳೆ ದೆಹಲಿಯಿಂದ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ ಎಂದರು.
ನಮ್ಮ ಅಭ್ಯರ್ಥಿಗಳು ಗೆಲ್ಲುವಂತೆ ನಾವು ಎಲ್ಲಾ ಪ್ರಯತ್ನ ಮಾಡುತ್ತೇವೆ. ಶಾಸಕ ರಮೇಶ್ ಜಾರಕಿಹೊಳಿ ವಿಚಾರ ನಂಗೆ ಏನೂ ಗೊತ್ತಿಲ್ಲ, ನೀವು ಅವರನ್ನೇ ಕೇಳಬೇಕು, ಆ ಬಗ್ಗೆ ಮಾತಾಡಲು ನನಗೆ ಇಷ್ಟ ಇಲ್ಲ ಎಂದರು.
ಕುಂದಗೋಳದಿಂದ ಎಂ.ಆರ್.ಪಾಟೀಲ್ ಮತ್ತು ಚಿಕ್ಕನಗೌಡರ್ ಹಾಗೂ ಚಿಂಚೋಳಿಯಿಂದ ರಾಮಚಂದ್ರ ಜಾಧವ್, ಸುನೀಲ್ ವಲ್ಯಾಪುರೆ ಹೆಸರು ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ.