ಚಿತ್ರದುರ್ಗ: ಟ್ಯಾಂಕರ್ ಬಂದು ಢಿಕ್ಕಿ ಹೊಡೆದ ಪರಿಣಾಮ ಚಿತ್ರದುರ್ಗದಲ್ಲಿ ಬಸ್ ಗೆ ಅಷ್ಟು ಬೇಗ ಬೆಂಕಿ ಹತ್ತಿಕೊಳ್ಳಲು ಕಾರಣ ಕೇವಲ ಡೀಸೆಲ್ ಟ್ಯಾಂಕ್ ಅಲ್ಲ. ಬೇರೆಯೇ ಕಾರಣವಿದೆ ಎನ್ನಲಾಗುತ್ತಿದೆ.
ಚಿತ್ರದುರ್ಗದ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಬಸ್ ಗೆ ಬೆಂಕಿಗೆ ಆಹುತಿಯಾಗಿದೆ. ಇದರಿಂದ 9 ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಈ ಧಾರುಣ ಘಟನೆಗೆ ಕಾರಣವೇನೆಂದು ಚರ್ಚೆಯಾಗುತ್ತಿದೆ.
ಮೊದಲು ಡೀಸೆಲ್ ಟ್ಯಾಂಕ್ ಗೆ ಟ್ಯಾಂಕರ್ ಗುದ್ದಿದ್ದರಿಂದಲೇ ಅಷ್ಟು ಬೇಗ ಬಸ್ ಬೆಂಕಿಗೆ ಆಹುತಿಯಾಯಿತು ಎನ್ನಲಾಗುತ್ತಿತ್ತು. ಆದರೆ ಇದೊಂದೇ ಕಾರಣವಲ್ಲ ಎಂದು ಈಗ ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ಡೀಸೆಲ್ ಟ್ಯಾಂಕ್ ನ್ನು ಅಪಘಾತವಾದರೂ ಹಾನಿಯಾಗದ ರೀತಿಯಲ್ಲಿ ಆದಷ್ಟು ಸೇಫ್ ಜಾಗದಲ್ಲಿ ಇರಿಸಲಾಗುತ್ತದೆ.
ಆದರೆ ಇಲ್ಲಿ ಬಸ್ ಗೆ ಅಷ್ಟು ಬೇಗ ಬೆಂಕಿ ಹತ್ತಿ ಗಂಭೀರ ಪರಿಸ್ಥಿತಿಯಾಗಲು ಕಾರಣ ಬಸ್ ನಲ್ಲಿದ್ದ ಲಗೇಜ್, ಪೇಂಟ್ ಕ್ಯಾರಿಯರ್ ಗಳು ಎನ್ನಲಾಗುತ್ತಿದೆ. ಈ ರೀತಿ ಖಾಸಗಿ ಬಸ್ ಗಳಲ್ಲಿ ಲಗೇಜ್ ಗಳನ್ನು ಹೊತ್ತೊಯ್ಯುವುದರಿಂದಲೇ ಅಪಘಾತವಾದಾಗ ಇಂತಹ ದುರಂತ ಸಂಭವಿಸುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಬಸ್ ನಲ್ಲೂ ಅದೇ ಪರಿಸ್ಥಿತಿಯಾಗಿತ್ತು ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ಈಗ ತನಿಖೆ ನಡೆಯುತ್ತಿದೆ.