Publish Date: Thu, 07 Sep 2017 (11:48 IST)
Updated Date: Thu, 07 Sep 2017 (11:52 IST)
ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಅವರು ಬಹುವಾಗಿ ಪ್ರೀತಿಯಿಂದ ಬೆಳೆಸಿದ ಲಂಕೇಶ್ ಪತ್ರಿಕೆಯ ಭವಿಷ್ಯವೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ಗೌರಿ ಸಹೋದರ ಇಂದ್ರಜಿತ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಏನು ಹೇಳಿದ್ದಾರೆ ಗೊತ್ತಾ?
ಲಂಕೇಶ್ ಪತ್ರಿಕೆ ಬಗ್ಗೆ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ. ನಮ್ಮ ತಾಯಿ ಈ ಬಗ್ಗೆ ನಿರ್ಧರಿಸಬೇಕು. ತಾಯಿ, ಸಹೋದರಿ ಕವಿತಾ ಜತೆ ಚರ್ಚಿಸಿ ಈ ಬಗ್ಗೆ ನಿರ್ಧರಿಸಬೇಕಿದೆ. ನಮ್ಮ ತಾಯಿ ಈಗ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿಲ್ಲ ಎಂದು ಇಂದ್ರಜಿತ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ಸಹೋದರಿ ಬಗ್ಗೆ ಹೇಳಿಕೊಂಡಿರುವ ಇಂದ್ರಜಿತ್, ಗೌರಿ ಜೀವನದುದ್ದಕ್ಕೂ ತನ್ನ ಹೋರಾಟವನ್ನು ತಾನೇ ಮಾಡಿಕೊಂಡಳು. ಯಾವತ್ತೂ ಅದರಲ್ಲಿ ನಮ್ಮನ್ನು ಎಳೆಯುತ್ತಿರಲಿಲ್ಲ ಎಂದು ಸಹೋದರ ಇಂದ್ರಜಿತ್ ಲಂಕೇಶ್ ಹೇಳಿಕೊಂಡಿದ್ದಾರೆ.
ಆಕೆ ಹೆಚ್ಚಾಗಿ ಏಕಾಂಗಿಯಾಗಿರಲು ಬಯಸುತ್ತಿದ್ದಳು. ಆದರೆ ತನ್ನ ವಿಚಾರಗಳಿಗಾಗಿ ಹೋರಾಡಿದಳು. ಅವಳು ಯಾವತ್ತೂ ನನಗೆ ಜೀವ ಬೆದರಿಕೆ ಇದೆ ಎನ್ನುವ ವಿಷಯವನ್ನು ನಮಗೆ ಹೇಳುತ್ತಿರಲಿಲ್ಲ. ಬಹುಶಃ ಆಕೆಗೆ ಆಕೆಯ ಹೋರಾಟಗಳಲ್ಲಿ ನಾವು ಬರುವುದು ಇಷ್ಟವಿರಲಿಲ್ಲವೇನೋ ಎಂದು ಇಂದ್ರಜಿತ್ ಸಂದರ್ಶನದಲ್ಲಿ ಹೇಳಿದ್ದಾರೆ.
ಆದರೆ ಈ ಕೊಲೆಗೆ ನ್ಯಾಯ ಸಿಗಬೇಕು. ಈ ಕೊಲೆಗಾರರಿಗೆ ಶಿಕ್ಷೆ ಕೊಡುವ ಮೂಲಕ ಬೇರೆ ಕೊಲೆಯಾಗದಂತೆ ಪಾಠವಾಗಬೇಕು ಎಂದು ಇಂದ್ರಜಿತ್ ಅಭಿಪ್ರಾಯಪಟ್ಟಿದ್ದಾರೆ.