Publish Date: Sun, 09 Apr 2023 (11:10 IST)
Updated Date: Sun, 09 Apr 2023 (12:10 IST)
ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ, ಗುಲಾಮಗಿರಿಗೆ ಯಾವುದೇ ಆಕ್ಷೇಪ ಇಲ್ಲ. ಆದ್ರೆ ಅಮುಲ್ ಭಾರತದ ಬ್ರ್ಯಾಂಡ್, ಭಾರತದಲ್ಲೇ ಮಾರಾಟ ಮಾಡಿದ್ರೆ ಇವರಿಗೇನು ತೊಂದರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿ ಕಾರಿದ್ದಾರೆ.
ನಂದಿನಿ-ಅಮುಲ್ ಜಟಾಪಟಿ ವಿಚಾರದಲ್ಲಿ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ, ಗುಲಾಮಗಿರಿಗೆ ಯಾವುದೇ ಆಕ್ಷೇಪ ಇಲ್ಲ. ಅಮುಲ್ ಭಾರತದ ಬ್ರ್ಯಾಂಡ್, ಇಲ್ಲೇ ಮಾರಾಟ ಮಾಡಿದ್ರೆ ಇವರಿಗೇನು ತೊಂದರೆ. ಇದೆಂಥ ಸೋತವರ ಗುಂಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಟ್ವೀಟ್ ಮೂಲಕವೂ ಆಕ್ಷೇಪ ವ್ಯಕ್ತಪಡಿಸಿರುವ ಸಿ.ಟಿ ರವಿ, ಕಾಂಗ್ರೆಸ್ ನಮ್ಮ ತಾಯಂದಿರು ಹಾಗೂ ಅಕ್ಕಂದಿರನ್ನು ಕೇವಲ ಸಗಣಿ ಬಾಚಲು ಬಿಟ್ಟಿತ್ತು. ಆದರೆ ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಸಬ್ಸಿಡಿ ಕೊಟ್ಟು ಗ್ರಾಮೀಣ ಕುಟುಂಬಗಳ ಬದುಕನ್ನು ಸಮೃದ್ಧಿಗೊಳಿಸಿತು. ನಂದಿನಿ ಈಗಾಗಲೇ 12 ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿದ್ದು, ಇನ್ನೂ ಹೆಚ್ಚು ರಾಜ್ಯಗಳಲ್ಲಿ ಉತ್ಪನ್ನಗಳನ್ನ ಮಾರಾಟ ಮಾಡಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.