Publish Date: Fri, 24 May 2019 (14:31 IST)
Updated Date: Fri, 24 May 2019 (14:32 IST)
ಜೆಡಿಎಸ್ ಪಾಳೆಯದಲ್ಲಿ ಒಂದೆಡೆ ಸಂತೋಷ, ಮತ್ತೊಂದೆಡೆ ಬೇಸರ ಇದೆ. ಏತನ್ಮಧ್ಯೆ ನೂತನ ಸಂಸದ ಪ್ರಜ್ವಲ್ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಸಂಸದರಾಗಿ ಆಯ್ಕೆಯಾದ ಬಳಿಕ ಪ್ರಜ್ವಲ್ ರೇವಣ್ಣ ಮೊದಲ ಸುದ್ದಿಗೋಷ್ಟಿ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟ ಹಿನ್ನಲೆಯಲ್ಲಿ ಜಿಲ್ಲೆಯ ಜನರು ನನ್ನ ಗೆಲ್ಲಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಜೆಡಿಎಸ್ - ಕಾಂಗ್ರೆಸ್ ನ ಎಲ್ಲರೂ ನಮಗೆ ಶಕ್ತಿ ತುಂಬಿದ್ದಾರೆ.
ಇದು ಪ್ರಜ್ವಲ್ ರೇವಣ್ಣ ಗೆಲುವಲ್ಲ ನನ್ನ ಜಿಲ್ಲೆಯ ಜನತೆಯ ಗೆಲುವು ಎಂದರು. ಉಭಯ ಪಕ್ಷಗಳ ಕಾರ್ಯಕರ್ತರು ಹೋರಾಟ ಮಾಡಿ ಗೆಲ್ಲಿಸಿದ್ದಾರೆ. ಇದು ಕಾರ್ಯಕರ್ತರು ಮತ್ತು ದೇವೇಗೌಡರ ಗೆಲುವು ಎಂದರು.
ದೇವೇಗೌಡರು ಸೋತಿರುವುದಕ್ಕೆ ದುಃಖ ಆಗುತ್ತಿದೆ. ಹೋರಾಟವೇ ಜೀವನ ಎಂದುಕೊಂಡಿದ್ದ ಗೌಡರಿಗೆ ಆಕಸ್ಮಿಕ ಸೋಲಾಗಿದೆ ಎಂದರು.
ನಾನು ರಾತ್ರಿ ಇಡೀ ಚಿಂತಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಹಾಸನ ಜಿಲ್ಲೆಯ ಜನರು ತಪ್ಪು ತಿಳಿಯ ಬಾರದು. ನಾನು ರಾಜೀನಾಮೆ ಕೊಡೋ ತೀರ್ಮಾನಕ್ಕೆ ಬಂದಿದ್ದೇನೆ. ಮತ್ತೆ ದೇವೇಗೌಡರಿಗೆ ಶಕ್ತಿ ತುಂಬೋದು ನನ್ನ ಉದ್ದೇಶವಾಗಿದೆ. ನನ್ನ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿರೋದಕ್ಕೆ ನನಗೆ ಬೇಜಾರಿಲ್ಲ ಎಂದರು. ಮೋದಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಿಂದ ಆಯ್ಕೆಯಾದ ಎಲ್ಲಾ ಲೋಕಸಭಾ ಸದಸ್ಯರಿಗೂ ಅಭಿನಂದಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ರು.