Publish Date: Sat, 29 Apr 2023 (15:30 IST)
Updated Date: Sat, 29 Apr 2023 (15:14 IST)
ದಕ್ಷಿಣ ವಲಯದ ವಿವಿಧ ಇಲಾಖೆಗಳ ಅಧಿಕಾರಿ/ನೌಕರರಿಂದ ಸಾರ್ವಜನಿಕರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂದು ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಚಾಲನೆ ನೀಡಿದರು.
ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಮಾನ್ಯ ಚುನಾವಣಾ ಆಯೋಗ ರವರ ಆದೇಶದ ಮೇರೆಗೆ ಮತದಾರರಲ್ಲಿ ಮತದಾನದ ಬಗ್ಗೆ ಅರಿವು/ಜಾಗೃತಿ ಮೂಡಿಸಲು ಹಲವಾರು ಮತದಾನ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಅದರ ಭಾಗವಾಗಿ ಇಂದು ಬಿ.ಎಂ.ಟಿ.ಸಿ ಬಸ್ ನಿಲ್ದಾಣ, ಶಾಂತಿನಗರ ಮತ್ತು ವಿಲ್ಸನ್ ಗಾರ್ಡನ್ನ ಮುಖ್ಯರಸ್ತೆಗಳಲ್ಲಿ ಮತದಾನ ಜಾಗೃತಿ ಜಾಥಾ ಹಾಗೂ ಬೀದಿ ನಾಟಕವನ್ನು ನಡೆಸಲಾಯಿತು.
ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಯಾವೊಬ್ಬ ಮತದಾರರು ಮತದಾನದಿಂದ ಹೊರಗುಳಿಯಬಾರದೆಂಬ ಉದ್ದೇಶದಿಂದ ಹಾಗೂ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಚುನಾವಣಾ ಅಕ್ರಮಗಳ ಬಗ್ಗೆ C-VIGIL ತಂತ್ರಾಶದ ಮೂಲಕ ದೂರು ದಾಖಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಎಲ್ಲರೂ ವಿದ್ಯಾವಂತರಾಗಿದ್ದು, ಸಮಾಜದ ಒಳಿತಿಗಾಗಿ ಉತ್ತಮ ಅಭ್ಯರ್ಥಿಗೆ ಮತಚಾಯಿಸಿ ಎಂದು ಮನವಿ ಮಾಡಿದರು.
ಮಾತದಾನ ಮಾಡುವ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲು ಮಾತದಾನ ಸಂಕಲ್ಪ ನಾಟಕವನ್ನು ಪ್ರದರ್ಶಿಸಲಾಯಿತು.
ಈ ವೇಳೆ ಬಿ.ಎಂ.ಟಿ.ಸಿಯ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ, ಬಿಎಂಟಿಸಿ ಐಟಿ ನಿರ್ದೇಶಕರಾದ ಸೂರ್ಯಸೇನ್, ದಕ್ಷಿಣ ವಲಯದ ಉಪ ಆಯುಕ್ತರಾದ ಲಕ್ಷ್ಮೀದೇವಿ, ನೋಡಲ್ ಅಧಿಕಾರಿಯಾದ ಸುರೇಶ್, ಬಿಎಂಟಿಸಿಯ ಅಧಿಕಾರಿ/ಸಿಬ್ಬಂದಿಗಳು, ಪೌರಕಾರ್ಮಿಕರು, ಕಂದಾಯ ಅಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.