Publish Date: Mon, 17 Apr 2023 (18:00 IST)
Updated Date: Mon, 17 Apr 2023 (17:24 IST)
158 - ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಂಜಯನಗರ ಹಾಗೂ ಡಾಲರ್ಸ್ ಕಾಲೋನಿಯ ಸುತ್ತಮುತ್ತಲಿನ ವಸತಿ ಸಮುಚ್ಚಯಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು.
ಪೂರ್ವ ವಲಯ ಆಯುಕ್ತರಾದ ಶ್ರೀ ಪಿ.ಎನ್. ರವೀಂದ್ರ ರವರ ನೇತೃತ್ವದಲ್ಲಿ ಸಂಜಯ್ ನಗರದ ಫೆಬೆಲ್ ಬೇ ಅಪಾರ್ಟ್ಮೆಂಟ್, ಸ್ಟರ್ಲಿಂಗ್ ಅಪಾರ್ಟ್ಮೆಂಟ್, ಆಂಡ್ರಿಯಾ ಅಪಾರ್ಟ್ಮೆಂಟ್ ಗಳಿಗೆ ಇಂದು ಭೇಟಿ ನೀಡಿ ಅಲ್ಲಿ ವಾಸವಿರುವ ನಿವಾಸಿಗಳಲ್ಲಿ ಮತದಾನ ಮಾಡುವ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಡಾಲರ್ಸ್ ಕಾಲೋನಿಯ ಪ್ರಮುಖ ರಸ್ತೆಗಳಲ್ಲಿ ನಡೆದ ಜಾಥಾ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಪಾಲಿಕೆ ಅಧಿಕಾರಿ-ಸಿಬ್ಬಂದಿ ವರ್ಗವು ಬಿತ್ತಿಪತ್ರಗಳನ್ನು ಪ್ರದರ್ಶಿಸಿಕೊಂಡು ಮತದಾನದ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಈ ವೇಳೆ ಆಟೋದಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಮತದಾನ ಮಾಡುವ ಬಗ್ಗೆ ನಾಗರಿಕರು ಸ್ವತಃ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವಂತೆ ಪ್ರೇರೇಪಿಸುವ ಕೆಲಸ ಮಾಡಲಾಯಿತು.
ಈ ವೇಳೆ ಕಂದಾಯ ಅಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ ಶ್ರೀನಿವಾಸ್ ಮೂರ್ತಿ, ಮೌಲ್ಯಮಾಪಕರಾದ ಅಮೃತ್ ರಾಜ್, ಆರೋಗ್ಯ/ಕಂದಾಯ ಇಲಾಖೆಯ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.