Publish Date: Sat, 01 Feb 2025 (16:51 IST)
Updated Date: Sat, 01 Feb 2025 (16:53 IST)
ಚಿಕ್ಕಮಗಳೂರು: ಕಳೆದ ಒಂದೂವರೆ ದಶಕದಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದ ಶೃಂಗೇರಿ ತಾಲೂಕಿನ ಕೋಟೆಹೊಂಡ ಗ್ರಾಮದ ರವೀಂದ್ರ ಇಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ಮೂಲಕ ಸರ್ಕಾರ ಪ್ಯಾಕೇಜ್ಗೆ ಒಪ್ಪಿಗೆ ಸೂಚಿಸಿ, ಮುಖ್ಯವಾಹಿನಿ ಬರಲು ನಿರ್ಧರಿಸಿದ್ದಾನೆ.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಶನಿವಾರ ಮಧ್ಯಾಹ್ನ ನಾಗರಿಕ ಶಾಂತಿಗಾಗಿ ವೇದಿಕೆಯ ಸದಸ್ಯರ ಜೊತೆ ಆಗಮಿಸಿದ ರವೀಂದ್ರ ನಕ್ಸಲ್ ಪುರ್ನವಸತಿ ಮತ್ತು ಶರಣಾಗತಿ ಸಮಿತಿ ಜಿಲ್ಲಾ ಅಧ್ಯಕ್ಷೆಯೂ ಆಗಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್, ಶರಣಾಗತಿ ಸಮಿತಿಯ ಸದಸ್ಯ ಕೆ.ಪಿ.ಶ್ರೀಪಾಲ್, ನೂರ್ ಶ್ರೀಧರ್ ಸೇರಿದಂತೆ ಇತರರ ಮುಂದೆ ರವೀಂದ್ರ ಶರಣಾಗಿದ್ದಾರೆ.
ಈ ವೇಳೆ ಮಾತನಾಡಿದ ರವೀಂದ್ರ, ನಾನು ಸ್ವ ಇಚ್ಚೆಯಿಂದ ಸಮಾಜದ ಮುಖ್ಯವಾಹಿನಿಗೆ ಬಂದಿದ್ದೇನೆ. ಯಾರ ಒತ್ತಡದಿಂದ ಬಂದಿಲ್ಲ, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರದ ಮುಂದೆ ಮನವಿ ಮಾಡಿದ್ದಾನೆ.
ಕಳೆದ ಒಂದೂವರೆ ದಶಕದಿಂದ ಭೂಗತನಾಗಿದ್ದ ರವೀಂದ್ರ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಇವರ ವಿರುದ್ಧ ಜಿಲ್ಲೆಯಲ್ಲಿ ಮೇಲೆ 14 ಕೇಸ್ ಗಳಿವೆ ಎಂದು ತಿಳಿದುಬಂದಿದೆ.