Publish Date: Mon, 16 Feb 2026 (11:15 IST)
Updated Date: Mon, 16 Feb 2026 (11:18 IST)
ಬೆಂಗಳೂರು: ಆರ್ ಎಸ್ಎಸ್ ದೆವ್ವವಿದ್ದಂತೆ, ಆ ಸಂಸ್ಥೆ ನೋಂದಣಿಯಾಗುವಂತೆ ನಾನು ಮಾಡುತ್ತೇನೆ ಎಂದಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ ಕೌಂಟರ್ ಕೊಟ್ಟಿರುವ ಬಿವೈ ವಿಜಯೇಂದ್ರ ಮೊದಲು ನಿಮ್ಮ ಕಾಂಗ್ರೆಸ್ ನೋಂದಣಿ ರದ್ಧತಿ ಆಗದಂತೆ ನೋಡಿಕೊಳ್ಳಿ ಎಂದಿದ್ದಾರೆ.
ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ದೆವ್ವವಿದ್ದಂತೆ. ಆ ಸಂಸ್ಥೆಗೆ ದೇಣಿಗೆ ಎಲ್ಲಿಂದ ಬರುತ್ತದೆ? ಇದುವರೆಗೆ ನೋಂದಣಿ ಮಾಡಿಕೊಂಡಿಲ್ಲ. ನಾನು ಅದನ್ನು ಮಾಡುವಂತೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದರು.
ಇದಕ್ಕೆ ಇಂದು ತಿರುಗೇಟು ಕೊಟ್ಟಿರುವ ವಿಜಯೇಂದ್ರ ರಾಜಕೀಯ ಭೂಪಟದಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಅಂಚಿನಲ್ಲಿರುವ ಕಾಂಗ್ರೆಸ್ ಪಕ್ಷದ ನೋಂದಣಿ ರದ್ದತಿ ಯಾಗದಂತೆ ಮೊದಲು ಎಚ್ಚರ ವಹಿಸಿ ನಂತರ ಇತರ ನೋಂದಣಿ ಬಗ್ಗೆ ತಲೆಕೆಡಿಸಿಕೊಳ್ಳುವಿರಂತೇ.
“ಅಮೃತ ಹೊರಬರಲು ನಂಜು ನುಂಗಿದ ವಿಷಕಂಠನಂತೇ ಹಿಂದೂ ವಿರೋಧಿ ಕಾರ್ಕೋಟಕ ವಿಷ ಜಂತುಗಳ ಮೆಟ್ಟಿ ನಿಂತಿರುವ ಆರ್ ಎಸ್ಎಸ್ ಕುಟುಕುವುದೇ ಮರಿ ಚೇಳೊಂದರ ಚೇಷ್ಟೆಯಾಗಿದೆ.” ದೆವ್ವದ ಮನಸ್ಥಿತಿಯವರಿಂದ ದೈವದ ಮಾತು ಹೊರಬರಲು ಸಾಧ್ಯವೇ? ರಾಜಕಾರಣದಲ್ಲಿ ನಿರಂತರ ರಾಜಕೀಯ ಅಧಿಕಾರ ಅನುಭವಿಸುತ್ತಾ ಬಂದಿರುವ ಖರ್ಗೆ ಕುಟುಂಬದ ಕೊಡುಗೆ ಏನೆಂದರೇ ಭಾರತದ ಭೂಪಟದಲ್ಲಿ ಕಲ್ಯಾಣ ಕರ್ನಾಟಕವನ್ನು ಅತ್ಯಂತ ಹಿಂದುಳಿಯುವಂತೆ ಮಾಡಿದ್ದು.
ಪ್ರಿಯಾಂಕ ಖರ್ಗೆ ಸಚಿವರಾದ ನಂತರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದ್ದಾರೆ? ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಾಗೂ ಕೀಳು ಪ್ರಚಾರದ ತೆವಲಿನಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಗುರಿಯಾಗಿಸಿಕೊಂಡು ಸಜ್ಜನಿಕೆಯಿಲ್ಲದ ಕೀಳು ಅಭಿರುಚಿಯ ಟೀಕೆ ಮಾಡುವ ತೆವಲು ಹೆಚ್ಚಿಸಿಕೊಂಡಿದ್ದಾರೆ. ಪ್ರಿಯಾಂಕ ಖರ್ಗೆ ಅವರ ಆರ್.ಎಸ್. ಎಸ್. ವಿರೋಧಿ ಮಾತುಗಳಲ್ಲಿ ರಾಷ್ಟ್ರ ದ್ರೋಹಿ ಶಕ್ತಿಗಳನ್ನು ಮೆಚ್ಚಿಸುವ ಹಾಗೂ ಹಿಂದೂ ಧರ್ಮವನ್ನು ಅಪಮಾನಿಸುವ ಹಿನ್ನೆಲೆಯ ಮನಸ್ಥಿತಿ ಅಡಗಿದೆ. ಕಾಂಗ್ರೆಸ್ ಪಕ್ಷ ಹಿಂದೂ ಪರಂಪರೆ ಮತ್ತು ಹಿಂದೂ ಪರ ಸಂಘಟನೆಗಳನ್ನು ತೇಜೋವಧೆ ಮಾಡುವುದಕ್ಕಾಗಿಯೇ ಪ್ರಿಯಾಂಕ್ ಖರ್ಗೆಯವರಂತವರನ್ನು ವಕ್ತಾರರುಗಳನ್ನಾಗಿ ನೇಮಿಸಿರುವಂತಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮುಖಂಡ ಹರ್ಷ ವರ್ಧನ್ ಸಪ್ಕಲ್ ಛತ್ರಪತಿ ಶಿವಾಜಿ ಮಹಾರಾಜರಿಗೆ ಟಿಪ್ಪುವನ್ನು ಹೋಲಿಸಿ ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣರಾಗಿದ್ದಾರೆ.
ಪುರಾಣ ಕಥೆಗಳಲ್ಲಿ ದೈವನಿಂದನೆ ಹಾಗೂ ದೈವಭಕ್ತರನ್ನು ಕಾಡುವುದೇ ರಾಕ್ಷಸೀ ಕುಲದ ಕೃತ್ಯವಾಗಿತ್ತು. ಅದೇ ಮಾದರಿಯಲ್ಲಿ ಇಂದು ರಾಷ್ಟ್ರ ಭಕ್ತ ಸಂಘಟನೆ ʼರಾಷ್ಟ್ರೀಯ ಸ್ವಯಂ ಸೇವಕ ಸಂಘʼವನ್ನು ನಿಂದಿಸುವುದು, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಹಿಂದೂಪರ ಕಾರ್ಯಕರ್ತರು ಹಾಗೂ ದಾರ್ಶನಿಕರನ್ನು ಗುರಿಯಾಗಿಸಿ ಕೊಳ್ಳುವುದು ಕಾಂಗ್ರೆಸ್ ಪಕ್ಷದ 'Hidden Agenda' ಆಗಿದೆ. ಅದರ ಭಾಗವಾಗಿ ಪ್ರಿಯಾಂಕ ಖರ್ಗೆ ಅವರಂಥಹ ಪಾತ್ರಧಾರಿಗಳು ಪ್ರಾಮಾಣಿಕವಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಧರ್ಮ ಎಂದೂ ಸೋತಿಲ್ಲ, ಸೋಲಿಸಲು ಬಂದವರನ್ನು ಉಳಿಸಿಲ್ಲ. ಭಾರತದ ಇತಿಹಾಸದಲ್ಲಿ ಇದು ನಿರಂತರ ಸಾಬೀತಾಗುತ್ತಲೇ ಬರುತ್ತಿದೆ. ಈ ಹಿನ್ನೆಲೆಯಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನ ಪೂರೈಸಿ ತನ್ನ ಸಂಘಟನೆಯ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾ ನಡೆಯುತ್ತಿರುವ ಜಗತ್ತಿನ ಏಕೈಕ ತತ್ವನಿಷ್ಠ ಧರ್ಮರಕ್ಷಕ ಸಂಘಟನೆಯಾಗಿ ಬೆಳೆದು ನಿಂತಿದೆ. ಭಾರತೀಯ ಜನತಾ ಪಾರ್ಟಿಯಂತಹ ರಾಜಕೀಯ ಪಕ್ಷ ದೇಶ ರಕ್ಷಣೆಗಾಗಿ ತನ್ನನ್ನು ಸಮರ್ಪಿಸಿಕೊಂಡಿರುವುದರ ಪ್ರತೀಕವಾಗಿ ವಿಶ್ವದಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷವಾಗಿ, ಮಹಾ ವೃಕ್ಷದಂತೆ ವಿಸ್ತರಿಸಿಕೊಂಡು ಬೆಳೆಯುತ್ತಲೇ ಇದೆ.
ಕಾಂಗ್ರೆಸ್ ಗಿಡ ಎಂದೇ ಹೆಸರಾಗಿರುವ ಪ್ರಾರ್ಥೇನಿಯಂ ನಂಥಾ ಕಾಂಗ್ರೆಸ್ ಪಕ್ಷದ ಕಳೆಯನ್ನು ಜನತೆ ಈಗಾಗಲೇ ದೇಶದಲ್ಲಿ ಬಹುತೇಕ ಕಿತ್ತೆಸೆದಿದ್ದಾರೆ. ರಾಜ್ಯದಲ್ಲೂ ಜನರು ಕಳೆ ಕೀಳಲು ಆರಂಭಿಸಿದ್ದಾರೆ 2೦28 ರಲ್ಲಿ ಅದು ಪರಿಪೂರ್ಣಗೊಳ್ಳಲಿದೆ ಆಗ ಪ್ರಿಯಾಂಕ್ ಖರ್ಗೆ ಯಾವ ನೋಂದಣಿ ಕಛೇರಿ ಮುಂದೆ ನಿಂತಿರುತ್ತಾರೋ ಕಾದು ನೋಡೋಣ? ಎಂದಿದ್ದಾರೆ.