Publish Date: Tue, 04 Mar 2025 (11:31 IST)
Updated Date: Tue, 04 Mar 2025 (11:39 IST)
ವಿಜಯಪುರ: ನನ್ನ ಮಗನನ್ನು ನೋಡಿಕೊಳ್ಳಲೂ ರಜೆ ಸಿಗಲಿಲ್ಲ. ಈಗ ಅವನನ್ನೇ ಕಳೆದುಕೊಂಡೆ. ನನ್ನ ಪರಿಸ್ಥಿತಿ ಯಾರಿಗೂ ಬೇಡ. ಹೀಗಂತ ವಿಜಯಪುರದ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಮನಕಲಕುವ ಪೋಸ್ಟ್ ಹಂಚಿಕೊಂಡಿರುವುದು ವೈರಲ್ ಆಗಿದೆ.
ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ ಬಂಡುಗೋಳ ಎಂಬವರು ಇಂತಹದ್ದೊಂದು ಪೋಸ್ಟ್ ತಮ್ಮ ವ್ಯಾಟ್ಸಪ್ ನಲ್ಲಿ ಹಾಕಿಕೊಂಡಿದ್ದರು. ಇದನ್ನು ಯಾರೋ ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಂಡುಗೋಳ ಅವರ ಮಗು ಆಸ್ಪತ್ರೆ ಬೆಡ್ ನಲ್ಲಿ ಮಲಗಿರುವ ಫೋಟೋ ಹಂಚಿಕೊಂಡಿದ್ದು, ಮಗನಿಗೆ ತುರ್ತು ಚಿಕಿತ್ಸೆ ಕೊಡಿಸಲು ನನಗೆ ರಜೆ ಸಿಗಲಿಲ್ಲ. ನನಗೆ ಬಂದ ಸ್ಥಿತಿ ಯಾರಿಗೂ ಬರಬಾರದು. ಮನಸ್ಸಿಗೆ ಬಹಳ ನೋವಾಯಿತು ಎಂದು ಬರೆದುಕೊಂಡಿದ್ದರು.
ಅವರ ಈ ಪೋಸ್ಟ್ ಬಗ್ಗೆ ಈಗ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು ಬಂಡುಗೋಳ ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ರಜೆಗೆ ಮನವಿ ಸಲ್ಲಿಸಿರಲಿಲ್ಲ. ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.