Publish Date: Tue, 24 Mar 2026 (11:48 IST)
Updated Date: Tue, 24 Mar 2026 (11:54 IST)
ಬೆಂಗಳೂರು: ಅನಿಲ್ ಕುಂಬ್ಳೆ ರಸ್ತೆಯಲ್ಲಿ ಮೊನ್ನೆ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಸ್ಟಂಟ್ ಮಾಡಿದ ಪ್ರಕರಣದಲ್ಲಿ ಆರೋಪಿ ಪರ ವಾದ ಮಂಡಿಸುತ್ತಿರುವ ವಕೀಲ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ.
ಮಾಜಿ ಭೂಗತ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರ ಒಡೆತನದ ಲ್ಯಾಂಬೋರ್ಗಿನಿ ಕಾರಿನ ಸ್ಟಂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅನಿಲ್ ಕುಂಬ್ಳೆ ಸರ್ಕಲ್ ಬಳಿ ಮೊನ್ನೆ ಮಧ್ಯರಾತ್ರಿ ಕಾರನ್ನು ಅತೀ ವೇಗವಾಗಿ ಚಲಾಯಿಸಿ ಸರ್ಕಲ್ ಹೊಡೆದು ಸ್ಟಂಟ್ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಈ ಸಂಬಂದ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ರಿಕ್ಕಿ ರೈ ಸೇರಿದಂತೆ ಇಬ್ಬರಿಗೆ ನೋಟಿಸ್ ನೀಡಲಾಗಿತ್ತು. ಪ್ರಕರಣದಲ್ಲಿ ಕಾರು ಮಾಲಿಕರ ಪರ ವಾದ ಮಂಡಿಸುತ್ತಿರುವ ವಕೀಲ ನಾರಾಯಣಸ್ವಾಮಿ ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆ ವೈರಲ್ ಆಗಿದೆ.
ಅಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ? ಅದೇನಾಗಿದೆ ಎಂದರೆ ಬ್ರೇಕ್ ಹೊಡೆದಾಗ ಸ್ಕಿಡ್ ಆಗಿದೆ ಅಷ್ಟೇ. ಅಲ್ಲಿ ಮರಳೆಲ್ಲಾ ಇತ್ತು ಹೀಗಾಗಿ ಸ್ಕಿಡ್ ಆಗಿದೆ. ಮೊನ್ನೆ ತಾನೇ ರೋಡ್ ರೆಡಿ ಮಾಡಿದ್ದಾರೆ. ಅದು ಬಿಟ್ಟು ದೊಡ್ಡದಾಗೇನೂ ಆಗಿಲ್ಲ. ಅದಾಗಿದ್ದ ತಕ್ಷಣ ಡ್ರೈವರ್ ಗಾಡಿ ಕರೆಕ್ಟ್ ಆಗಿ ತಗೊಂದು ಕರೆಕ್ಟ್ ಆಗಿ ರೋಡ್ ನಲ್ಲಿ ಗಾಡಿ ತೆಗೆದುಕೊಂಡು ಹೋಗಿದ್ದಾನೆ. ನನ್ನ ಪ್ರಕಾರ ಡ್ರೈವರ್ ನ ಟ್ಯಾಲೆಂಟ್ ಗೆ ಅಭಿನಂದಿಸಬೇಕು ಎಂದಿದ್ದರು. ಅವರ ಈ ಹೇಳಿಕೆಗೆ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ವಕೀಲರಿಗೆ ಚಪ್ಪಾಳೆ ಹೊಡೀರಿ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ.