Publish Date: Wed, 13 Jul 2022 (22:04 IST)
Updated Date: Wed, 13 Jul 2022 (22:05 IST)
ಕಳೆದ ಕೆಲ ದಿನಗಳಿಂದ ಭಾರಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಉತ್ತರಕನ್ನಡ ಜಿಲ್ಲೆಗೆ ಇಂದು ಆಗಮಿಸಬೇಕಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ರದ್ದಾಗಿದೆ. ನಿನ್ನೆ ಸಿಎಂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ತೆರಳಿ ಮಳೆ ಹಾನಿ ವೀಕ್ಷಣೆ ನಡೆಸಿದ್ದರು. ಸದ್ಯ ಉಡುಪಿಯಲ್ಲಿ ನೆರೆ ಹಾನಿ ವೀಕ್ಷಣೆ ಮಾಡುತ್ತಿದ್ದು, ಬಳಿಕ 12 ಗಂಟೆಗೆ ರಸ್ತೆ ಮಾರ್ಗವಾಗಿ ಆಗಮಿಸಿ ಭಟ್ಕಳ ತಾಲೂಕಿನ ಗೊರಟೆಗೆ ತೆರಳಿ ಕಡಲ್ಕೊರೆತದ ಹಾನಿಯ ವೀಕ್ಷಣೆ ಮಾಡಬೇಕಿತ್ತು. ಆದರೆ ಉಡುಪಿಯಲ್ಲಿಯೇ ಹೆಚ್ಚಿನ ಸಮಯವಾಗುವ ಕಾರಣ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿಲ್ಲವೆಂದು ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ. ಜಿಲ್ಲೆಯ ಅಧಿಕಾರಿಗಳನ್ನು ಉಡುಪಿಗೆ ಕರೆಸಿಕೊಂಡು ಅಲ್ಲಿಯೇ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.