Publish Date: Tue, 26 Dec 2023 (15:01 IST)
Updated Date: Tue, 26 Dec 2023 (15:26 IST)
ತವರಿಗೆ ಹೋಗುವ ವಿಚಾರವಾಗಿ ನಡೆದ ಗಲಾಟೆಯಿಂದ ಬೇಸತ್ತಿದ್ದರು' ಎನ್ನಲಾದ ಪವಿತ್ರಾ (28) ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಹುಳಿಯೂರಿನ ಪವಿತ್ರಾ, ಹಿರಿಯೂರಿನ ಚೇತನ್ ಅವರನ್ನು ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದರು.
ಚೇತನ್, ಬೆಂಗಳೂರಿನ ಕಂಪನಿಯೊಂದರ ಉದ್ಯೋಗಿ. ನೆಲಮಂಗಲದಲ್ಲಿ ನೆಲೆಸಿದ್ದ ದಂಪತಿಗೆ 11 ತಿಂಗಳ ಮಗುವಿದೆ' ಎಂದು ಪೊಲೀಸರು ಹೇಳಿದರು.
'ಕ್ರಿಸ್ಮಸ್ ಹಬ್ಬದ ನಿಮಿತ್ತ ಸಾಲು ಸಾಲು ರಜೆಗಳಿದ್ದವು. ಪವಿತ್ರಾ ಅವರು ಸಂಬಂಧಿಕರೊಬ್ಬರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತವರು ಮನೆಗೆ ಹೋಗೋಣವೆಂದು ಪತಿ ಚೇತನ್ಗೆ ಹೇಳಿದ್ದರು. ಕೆಲಸದ ಒತ್ತಡದಿಂದಾಗಿ ರಜೆ ಇಲ್ಲವೆಂದು ಚೇತನ್ ತಿಳಿಸಿದ್ದರು. ಅಷ್ಟಕ್ಕೆ ದಂಪತಿ ನಡುವೆ ಜಗಳ ಶುರುವಾಗಿತ್ತು. ಚೇತನ್, ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಹೋಗಿದ್ದರು.'
'ಕೊಠಡಿಗೆ ಹೋಗಿದ್ದ ಪವಿತ್ರಾ, ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಹೋಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ಸಂಬಂಧ ಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ' ಎಂದು ಪೊಲೀಸರು ತಿಳಿಸಿದರು.