Publish Date: Wed, 04 Oct 2017 (08:44 IST)
Updated Date: Wed, 04 Oct 2017 (08:47 IST)
ಮಂಗಳೂರು: ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಾಲು ಸಾಲು ಹತ್ಯೆ ಖಂಡಿಸಿ ಕಣ್ಣೂರಿನ ಪಯ್ಯನೂರಿನಲ್ಲಿ ಹಮ್ಮಿಕೊಂಡಿರುವ ಜನರಕ್ಷಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಿನ್ನೆ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ರಾತ್ರಿ ಸುಮಾರು 11.45ರ ಹೊತ್ತಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನ ಸಂಸದ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದ್ರು. ಈ ವೇಳೆ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಬಳಿಕ ಯೋಗಿ ಅಲ್ಲಿಂದ ನೇರವಾಗಿ ರಸ್ತೆ ಮೂಲಕ ಕೇರಳದ ಕಣ್ಣೂರಿಗೆ ತೆರಳಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ನಿನ್ನೆ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಫೈರ್ ಬ್ರಾಂಡ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇಂದು ನಡೆಯಲಿರುವ ಜನರಕ್ಷಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಇಂದು ಕೇಚೆರಿಯಿಂದ ಕಣ್ಣೂರುವರೆಗೆ ಜನರಕ್ಷಾ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಜನರಕ್ಷಾ ಯಾತ್ರೆ ಕೇರಳದ ವಿವಿಧ ಭಾಗದಲ್ಲಿ ಸಂಚರಿಸಿ, ಅ. 17ರಂದು ತಿರುವನಂತಪುರಂನಲ್ಲಿ ಕೊನೆಗೊಳ್ಳಲಿದೆ.