Publish Date: Sat, 13 Jul 2024 (10:25 IST)
Updated Date: Sat, 13 Jul 2024 (10:28 IST)
ಉಡುಪಿ: ದೇವರ ದುಡ್ಡಿಗೇ ಕೈ ಹಾಕಿದ ಕಳ್ಳನನ್ನು ದೈವವೇ ಹಿಡಿದುಕೊಟ್ಟ ಪವಾಡ ಸದೃಶ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಮೂಲಕ ಮತ್ತೊಮ್ಮೆ ದೈವ ಎಷ್ಟು ಕಾರಣಿಕ ಎಂದು ತೋರಿಸಿಕೊಟ್ಟಿದೆ.
ಕರಾವಳಿಗರು ಏನೇ ತೊಂದರೆಗಳಾದರೂ ಮೊದಲು ಹೋಗುವುದು ದೈವದ ಬಳಿ. ದೈವದ ಬಳಿ ತಮ್ಮ ಸಂಕಷ್ಟಗಳನ್ನುಹೇಳಿಕೊಂಡು ಪರಿಹಾರ ಕೊಡಿಸುವಂತೆ ಕೇಳಿಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಕಳ್ಳತನ, ಶತ್ರುಬಾಧೆ ವಿಚಾರವಾಗಿ ದೈವದ ಮೊರೆ ಹೋಗುವುದು ಸಾಮಾನ್ಯ.
ಇದೀಗ ಉಡುಪಿಯ ಬಬ್ಬು ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೂ ದೈವದ ಮೊರೆ ಹೋಗಲಾಗಿತ್ತು. ದೇವಾಲಯದ ಕಾಣಿಕೆ ಹುಂಡಿ ಒಡೆದು ಹಣ ಕಳ್ಳತನ ಮಾಡಲಾಗಿತ್ತು. ಇದರ ಬಗ್ಗೆ ದೈವದ ಬಳಿ ಭಕ್ತರೊಬ್ಬರು ಕಳ್ಳನನ್ನು ಹುಡುಕಿಸಿಕೊಡುವಂತೆ ಕೇಳಿಕೊಂಡಿದ್ದರು. ಅದರಂತೆ ದೈವ 24 ಗಂಟೆಯೊಳಗೆ ಹುಡುಕಿಸಿ ಕೊಡುವುದಾಗಿ ಅಭಯ ನೀಡಿತ್ತು.
ಕಳ್ಳತನ ಮಾಡಿದ ದೃಶ್ಯವನ್ನು ಸಿಸಿಟಿವಿಯಲ್ಲಿ ಗಮನಿಸಿದಾಗ ಕಳ್ಳನ ಚಹರೆ ಪತ್ತೆಯಾಗಿತ್ತು. ಆತನನ್ನೇ ಹೋಲುವ ವ್ಯಕ್ತಿ ಬಸ್ ನಿಲ್ದಾಣದಲ್ಲಿ ನಿದ್ರೆ ಮಾಡುತ್ತಿದ್ದುದನ್ನು ಸ್ಥಳೀಯ ಆಟೋ ಚಾಲಕರು ಗುರುತಿಸಿ ಹಿಡಿದುಕೊಟ್ಟಿದ್ದಾರೆ. ಈ ಮೂಲಕ ಕಳ್ಳತನ ನಡೆದ 24 ಗಂಟೆಯೊಳಗೆ ದೈವದ ಅಭಯದಿಂದ ಕಳ್ಳ ಸಿಕ್ಕಿಬಿದ್ದಿದ್ದಾನೆ.