Publish Date: Fri, 29 Sep 2017 (23:01 IST)
Updated Date: Fri, 29 Sep 2017 (23:03 IST)
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಮುಗಿಯುತ್ತಿದ್ದಂತೆ ಅರಮನೆ ಮತ್ತೊಂದು ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ವಿಜಯದಶಮಿ ಮುಗಿದ ಮರುದಿನವೇ ತ್ರಿಷಿಕಾ ದೇವಿ ಒಡೆಯರ್ ಸೀಮಂತ ಶಾಸ್ತ್ರ ನಡೆಯಲಿದೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಒಡೆಯರ್ ಸದ್ಯ ಗರ್ಭವತಿ. ಹೀಗಾಗಿ ಬೆಂಗಳೂರಿನ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ದಸರಾ ಅಂಗವಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಇತ್ತೀಚೆಗಷ್ಟೆ ಮೈಸೂರಿಗೆ ಆಗಮಿಸಿದ್ದರು. ನಾಳೆ ವಿಜೃಂಭಣೆಯ ದಸರಾ ಮಹೋತ್ಸವಕ್ಕೆ ತೆರೆಬೀಳಲಿದ್ದು, ಮಾರನೆ ದಿನ ಅಂದರೆ ಅ. 1ರಂದು ಅರಮನೆಯಲ್ಲಿ ತ್ರಿಷಿಕಾ ದೇವಿ ಒಡೆಯರ್ ಸಿಮಂತ ಕಾರ್ಯ ನಡೆಯಲಿದೆ.
ರಾಜವಂಶಸ್ಥರು ಹಾಗೂ ಸಂಬಂಧಿಕರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಪ್ರಮೋದಾ ದೇವಿ ಒಡೆಯರ್ ಸೇರಿದಂತೆ ತ್ರಿಷಿಕಾ ದೇವಿಯವರ ಕುಟುಂಬ ಸದಸ್ಯರು, ಗಣ್ಯರು ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಜಮನೆತನ ಮೂಲಗಳು ತಿಳಿಸಿವೆ.