Publish Date: Fri, 20 Dec 2024 (18:17 IST)
Updated Date: Fri, 20 Dec 2024 (18:20 IST)
ಬೆಂಗಳೂರು: ಹೈಕೋರ್ಟ್ನಿಂದ ಜಾಮೀನು ಪಡೆದು ಬಿಡುಗಡೆಯಾಗಿರುವ ಎಂಎಲ್ಸಿ ಸಿಟಿ ರವಿ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿ, ಟೆರರಿಸ್ಟ್ ರೀತಿ ನಡೆಸಿಕೊಂಡರು ಎಂದರು.
ಡಿ. 19ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದಿದ್ದ ಈ ಬಾರಿಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಕಡೆಯ ದಿನದಂದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಿಟಿ ರವಿಯವರು ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಈ ಸಂಬಂಧ ಸಿಟಿ ರವಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ ದಾಖಲಿಸಿದ್ದರು. ಅದರಂತೆ ರವಿ ಅವರನ್ನು ಪೊಲೀಸರು ಬಂಧಿಸಿದ್ದರು.
ಸಿಟಿ ರವಿಯವರನ್ನು ಡಿ. 20ರಂದು ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಅಷ್ಟರಲ್ಲಾಗಲೇ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ವಾದ, ಪ್ರತಿವಾದ ಆಲಿಸಿದ ನಂತರ ಸಿಟಿ ರವಿಯವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಈ ಕೂಡಲೇ ಬಿಡುಗಡೆ ಮಾಡುವಂತೆಯೂ ಆದೇಶ ಹೊರಡಿಸಿದೆ.
ಅವರವರ ಆತ್ಮ ವಿಮರ್ಶನೆ ಮಾಡಬೇಕು ಎನ್ನುತ್ತಾ ಮಾತು ಆರಂಭಿಸಿದ ಅವರು, 'ಸದನದಲ್ಲಿ ಏನೇ ಆಗಿದ್ದೂ ಸಭಾಪತಿಗಳು ನೋಡ್ಕೋತಾರೆ. ಸುಳ್ಳುಕೇಸ್ ಹಾಕಿ ನನ್ನನ್ನು ಟೆರರಿಸ್ಟ್ ರೀತಿ ನೋಡಿದರು. ನಿನ್ನೆ (ಡಿ. 19) ರಾತ್ರಿಯಿಡೀ ನಿದ್ರೆ ಮಾಡದೇ ಇದ್ದಿದ್ರಿಂದ ನನಗೆ ವಿಪರೀತ ತಲೆ ನೋವು ಆಗಿದೆ ಎಂದು ತಿಳಿಸಿದರು.
ಓರ್ವ ಜನಪ್ರತಿನಿಧಿಯಾದ ನನಗೆ ರಾತ್ರಿ ಊಟ ಕೊಟ್ಟಿಲ್ಲ. ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಈಗ (ಡಿ. 20ರ ಸಂಜೆ 5.30ರ ಸುಮಾರು) ಊಟ ಮಾಡಿದೆ. ತುಂಬಾ ಸುಸ್ತಾಗಿದ್ದೇನೆ ಎಂದು ತಮ್ಮ ಆರೋಗ್ದ ವಿವರಣೆ ನೀಡಿದರು. ಜೊತೆಗೆ, ಕೋರ್ಟ್ ಜಾಮೀನು ನೀಡಿರುವ ಆದೇಶದ ಪ್ರತಿ ನನಗಿನ್ನೂ ಸಿಕ್ಕಿಲ್ಲ. ಅದು ಸಿಕ್ಕ ನಂತರ ಎಲ್ಲಾ ವಿಚಾರ ಹಂಚಿಕೊಳ್ತೇನೆ ಎಂದು ಹೇಳಿದರು.