Publish Date: Sun, 16 Dec 2018 (18:19 IST)
Updated Date: Sun, 16 Dec 2018 (18:20 IST)
ಜಮೀನು ವಿವಾದ ಕಾರಣದಿಂದಾಗಿ ನಡುಬೀದಿಯಲ್ಲೇ ಎರಡು ಗುಂಪುಗಳ ಜನರು ಬಡಿದಾಡಿಕೊಂಡ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹಳ್ಳಿಕೆರೆ ಹಾಗೂ ತೊಪ್ಪನಹಳ್ಳಿ ಗ್ರಾಮದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಘಟನೆಯಲ್ಲಿ 3 ಮಹಿಳೆಯರು ಸೇರಿದಂತೆ 5 ಜನರಿಗೆ ಗಾಯಗಳಾಗಿವೆ. ಹಳ್ಳಿಕೆರೆಯ ತಗಡಯ್ಯ ಎಂಬುವರಿಗೆ ಗಂಭೀರ ಗಾಯವಾಗಿದೆ.
ಹಳ್ಳಿಕೆರೆ ಗ್ರಾಮದ ಪದ್ಮ, ನಾಗಮಣಿ, ಪುಟ್ಟಸ್ವಾಮಿ, ಪವಿತ್ರ, ಸೋಮಶೇಖರ್ ಹಾಗೂ ತೊಪ್ಪನಹಳ್ಳಿ ಗ್ರಾಮದ ಚನ್ನೇಗೌಡ, ಮುತ್ತುರಾಜು, ಮಧು, ಗಾಯಗೊಂಡವರಾಗಿದ್ದಾರೆ.
ಹಳ್ಳಿಕೆರೆ ಗ್ರಾಮದ ಸರ್ವೆ ನಂ. 237ರ ಮೂರು ಎಕರೆ ಜಮೀನನ್ನ ಮಹೇಂದ್ರ ಎಂಬುವರು ಖರೀದಿ ಮಾಡಿದರು. ಬಳಿಕ ಆ ಜಮೀನು ಪಕ್ಕವಿರುವ ಸರ್ವೆ ನಂ.92ರ ಪದ್ಮ ಎಂಬುವರ ಜಮೀನನ್ನು ಮಹೇಂದ್ರ ಒತ್ತುವರಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಈ ವಿಚಾರವಾಗಿ ಮಹೇಂದ್ರ ಬೆಂಬಲಿಗರು ಹಾಗೂ ಪದ್ಮ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ. ಮದ್ದೂರು ಪೋಲಿಸ್ ಠಾಣೆಯಲ್ಲಿ ಎರಡು ಗುಂಪುಗಳಿಂದ ದೂರು ಪ್ರತಿದೂರು ದಾಖಲಾಗಿವೆ.