Publish Date: Mon, 16 Dec 2024 (11:36 IST)
Updated Date: Mon, 16 Dec 2024 (11:39 IST)
ಬೆಂಗಳೂರು: ಬಿಜೆಪಿ ಕಾಲದಲ್ಲಿ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಬಾಯಿ ಬಿಡದೇ ಇರುವಂತೆ 150 ಕೋಟಿ ರೂ. ಡೀಲ್ ಮಾಡಿಕೊಂಡಿದ್ದರು ಎಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೇಲೆ ಬಂದಿರುವ ಆರೋಪಕ್ಕೆ ಈಗ ಅವರ ಪಕ್ಷದ ಕೆಲವರು ನಾಯಕರು ಬೆಂಬಲಕ್ಕೆ ನಿಂತಿದ್ದಾರೆ.
ಬಿವೈ ವಿಜಯೇಂದ್ರ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿಗೆ ಕಬಳಿಕೆ ಬಗ್ಗೆ ಎಲ್ಲೂ ಬಾಯ್ಬಿಡದಂತೆ 150 ಕೋಟಿ ರೂ.ಗಳ ಆಮಿಷವೊಡ್ಡಿದ್ದರು ಎಂಬ ಆರೋಪ ಬಂದಿದೆ. ಇದು ಈಗ ಆಡಳಿತಾರೂಢ ಕಾಂಗ್ರೆಸ್ ಗೆ ದೊಡ್ಡ ಅಸ್ತ್ರವಾಗಿದೆ.
ಇದೀಗ ಬಿವೈ ವಿಜಯೇಂದ್ರ ನೆರವಿಗೆ ನಿಂತಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ತನ್ನ ಭ್ರಷ್ಟಾಚಾರ ಮುಚ್ಚಿಡಲು ವಿಜಯೇಂದ್ರ ವಿರುದ್ಧ ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಮಾಣಿಪ್ಪಾಡಿ ವರದಿ ಕುರಿತು ಸಿಎಂ ಬೇಜವಾಬ್ಧಾರಿಯುತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ವಿಜಯೇಂದ್ರ ಪರವಾಗಿ ಮಾತನಾಡಿರುವ ಆರ್ ಅಶೋಕ್, ಸದನದಲ್ಲಿ ವಕ್ಫ್ ನೋಟಿಸ್ ಬಗ್ಗೆ, ಮುಡಾ ಹಗರಣದ ಬಗ್ಗೆ ಚರ್ಚೆ ಮಾಡಬೇಕಿದೆ. ಅದರಿಂದ ಪಲಾಯನ ಮಾಡಲು ಕಾಂಗ್ರೆಸ್ ಈಗ ವಿಜಯೇಂದ್ರ ವಿರುದ್ಧ 150 ಕೋಟಿ ರೂ.ಗಳ ಸುಳ್ಳು ಆರೋಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.