ಬೆಂಗಳೂರು: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಇಳಿಕೆ ಮಾಡುವ ಮೂಲಕ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಈ ಮಧ್ಯೆ ರಾಜ್ಯ ಸರ್ಕಾರ ಒಂದರ ಮೇಲೊಂದರಂತೆ ದರ ಏರಿಕೆ ಶಾಕ್ ನೀಡುತ್ತಿದೆ.
ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಬೆಲೆ ಏರಿಕೆ ಶಾಕ್ ಕೊಡಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ. ಹಾಲಿನ ಪ್ಯಾಕೆಟ್ ದರ ಏರಿಕೆ ಆಗಿರುವುದರ ನಡುವೆ ಈಗ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ ಬಂದಿದೆ.
ವಿದ್ಯುತ್ ದರ ಏರಿಕೆಯ ಮಾದರಿಯಲ್ಲೇ ಇನ್ನು ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಸಾರಿಗೆ ಸಂಸ್ಥೆಗಳ ದರ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿದೆ. ಕೆಇಆರ್ಸಿ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಅಸ್ತಿತ್ವಕ್ಕೆ ಬರಲಿದೆ.
ಕರ್ನಾಟಕ ಮೋಟಾರು ವಾಹನ ನಿಯಮ 1989ರ ಅಡಿಯಲ್ಲಿ ದರ ನಿಯಂತ್ರಣ ಸಮಿತಿಯನ್ನ ರಾಜ್ಯ ಸರ್ಕಾರ ರಚನೆ ಮಾಡಿದೆ. ಈ ಸಮಿತಿ ಪ್ರತಿ ವರ್ಷ ರಸ್ತೆ ಸಾರಿಗೆ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಿದೆ. ಈ ಸಮಿತಿ ಅಧ್ಯಕ್ಷರು ಹಾಗೂ ಇನ್ನಿಬ್ಬರು ಸದಸ್ಯರನ್ನು ಒಳಗೊಂಡಿದ್ದು. ಕಾಲಕಾಲಕ್ಕೆ ದರ ಪರಿಷ್ಕರಣೆ ಮಾಡಲಿದೆ.
ಇಂಧನ ದರ ಹೆಚ್ಚುತ್ತಿರುವ ಹಿನ್ನೆಲೆ ದೀರ್ಘಾವಧಿಯಲ್ಲಿ ಒಂದೇ ಬಾರಿ ಪ್ರಯಾಣ ದರ ಏರಿಕೆ ಬದಲು ಪ್ರತಿ ವರ್ಷ ದರ ಪರಿಷ್ಕರಣೆ ಮಾಡುವುದು ಸಮಿತಿ ರಚನೆಯ ಹಿಂದಿನ ಉದ್ದೇಶವಾಗಿದೆ.