Publish Date: Thu, 23 Aug 2018 (15:12 IST)
Updated Date: Thu, 23 Aug 2018 (15:17 IST)
ಕೊಡಗಿನಲ್ಲಿ ಹಿಂದಿನಂತೆ ಮಳೆ ಬೀಳೋದಿಲ್ಲ, ಹಲವು ಪ್ರದೇಶಗಳು ವಾಸಿಸಲು ಯೋಗ್ಯವಲ್ಲ ಹೀಗಂತ ಹೇಳುತ್ತಿದ್ದಾರೆ ತಜ್ಞರು.
ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದ ಇಸ್ರೋ ವಿಜ್ಞಾನಿಗಳು ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಕೊಡಗಿನ ಜೋಡುಪಾಲ ಹಾಗೂ ಅರೆಕಲ್ಗೆ ಭೇಟಿ ನೀಡಿದ ಇಸ್ರೋ ವಿಜ್ಞಾನಿಗಳು, ಸ್ಥಳಗಳ ಗಂಭೀರತೆಯನ್ನು ಪರೀಕ್ಷಿಸಿದರು. ತೀವ್ರ ಮಳೆಯಿಂದಾಗಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡ್ಡ ಪ್ರದೇಶಗಳಲ್ಲಿ ನೀರು ಇಂಗಿ ಸ್ಫೋಟದ ಮೂಲಕ ಹೊರಬಂದಿದೆ. ಪ್ರಕೃತಿ ಮಾತ್ರವಲ್ಲ, ಮಾನವನ ಕೃತ್ಯಗಳೂ ಇದಕ್ಕೆ ಕಾರಣವಾಗಿದ್ದು, ಕೊಡಗಿನಲ್ಲಿ ಹಿಂದಿನಂತೆ ಮಳೆ ಬೀಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಇನ್ನು ಮುಂದೆ ಮಳೆ ಕಡಿಮೆಯಾಗುವ ಗಂಭೀರ ವಿಚಾರವನ್ನು ಪ್ರಸ್ತಾಪ ಮಾಡಿದರು.
ಮದೆನಾಡು, ಜೋಡುಪಾಲ ಹಾಗೂ ಅರೆಕಲ್ ಸೇರಿದಂತೆ ಹಲವು ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ. ಈ ಪ್ರದೇಶಗಳಲ್ಲಿ ಮತ್ತೆ ಭೂಕುಸಿತವಾಗುವ ಸಾಧ್ಯತೆಯಿದೆ. ಪ್ರಸ್ತುತ ಪ್ರಾಥಮಿಕ ವರದಿಯನ್ನಷ್ಟೇ ನೀಡುತ್ತೇವೆ. ಇನ್ನೊಂದು ತಂಡ ಬಂದು ಪೂರ್ಣ ಪರಿಶೀಲನೆ ನಡೆಸಲಿದೆ. ಪೂರ್ಣ ತನಿಖೆಯ ಬಳಿಕವೇ ಅಂತಿಮ ವರದಿ ನೀಡುತ್ತೇವೆ ಎಂದಿದ್ದಾರೆ.