Publish Date: Fri, 03 Aug 2018 (14:43 IST)
Updated Date: Fri, 03 Aug 2018 (14:49 IST)
ಕುಡುಕ ಗಂಡನ ವರ್ತನೆಗೆ ಬೇಸತ್ತ ಮಹಿಳೆ ತನ್ನ ಎರಡು ಮಕ್ಕಳ ಸಮೇತ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸುವ ಮುನ್ಸೂಚನೆ ಅರಿತ ದೇವಾಲಯದ ಅಧಿಕಾರಿಗಳು ಪೊಲೀಸರ ನೆರವಿನಿಂದ ರಕ್ಷಿಸಿದ್ದಾರೆ. ಮೈಸೂರಿನ ಸುಣ್ಣದಕೇರಿ ನಿವಾಸಿ ಜಯ ಹಾಗೂ ಎರಡು ಹೆಣ್ಣುಮಕ್ಕಳು ರಕ್ಷಣೆಗೆ ಒಳಗಾದವರು. ತಮ್ಮ ಎರಡು ಮಕ್ಕಳ ಸಮೇತ ಕಪಿಲಾ ನದಿಗೆ ಹಾರಲು ಸಜ್ಜಾಗುತ್ತಿದ್ದಾಗ ರಕ್ಷಿಸಲ್ಪಟ್ಟಿದ್ದಾರೆ.
ಮೈಸೂರಿನ ಬೋಗಾದಿ ನಿವಾಸಿಯಾದ ಜಯ 6 ವರ್ಷಗಳ ಹಿಂದೆ ಸುಣ್ಣದಕೇರಿಯ ಶಿವಕುಮಾರ್ ನ ವರಿಸಿದ್ದಳು. ಗ್ರಾನೈಟ್ ಕೆಲಸ ಮಾಡುವ ಶಿವಕುಮಾರ್ ಕುಡಿತದ ಚಟಕ್ಕೆ ದಾಸನಾಗಿದ್ದ. ಶಿವಕುಮಾರ ಸಂಪಾದಿಸಿದ ಹಣವನ್ನೆಲ್ಲಾ ಕುಡಿತದ ಚಟಕ್ಕೇ ಸುರಿಯುತ್ತಿದ್ದ. ಕುಟುಂಬ ನಿರ್ವಹಣೆ ಕಷ್ಟವಾದಾಗ ಜಯ ನೆರೆಹೊರೆಯವರ ಬಳಿ ಕೈಸಾಲ ಮಾಡಿ ಟೀ ಅಂಗಡಿ ಇಟ್ಟು ನಷ್ಟ ಅನುಭವಿಸಿದ್ದರು.
ಗಂಡನ ವರ್ತನೆ ಬದಲಾಗದ ಹಿನ್ನಲೆ ಬೇಸತ್ತ ಜಯ ತನ್ನ ಎರಡು ಹೆಣ್ಣುಮಕ್ಕಳ ಸಮೇತ ಕಪಿಲಾ ನದಿಗೆ ಹಾರಲು ನಂಜನಗೂಡಿಗೆ ಬಂದು ಹದಿನಾರು ಕಾಲು ಮಂಟಪದ ಬಳಿ ಸಜ್ಜಾಗುತ್ತಿದ್ದಾಗ ದೇವಸ್ಥಾನದ ಸಿಬ್ಬಂದಿ ಗಮನಿಸಿ ಪೊಲೀಸರ ನೆರವಿನಿಂದ ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ.