Publish Date: Wed, 04 Jul 2018 (17:23 IST)
Updated Date: Wed, 04 Jul 2018 (17:28 IST)
ಅಷ್ಟ ಮಠಗಳ ನಡುವಿನ ಮುಸುಕಿನ ಗುದ್ದಾಟ ಮತ್ತೆ ಭುಗಿಲೆದ್ದಿದೆ. ಶೀರೂರು ಮಠದ ಪಟ್ಟದ ದೇವರನ್ನು ಹಿಂದಿರುಗಿಸಲು ಪರ್ಯಾಯ ಪಲಿಮಾರು ಮಠಾಧೀಶರು ನಿರಾಕರಿಸುವುದರೊಂದಿಗೆ ಶೀರೂರು ಮಠದೊಂದಿಗಿನ ಸಂಘರ್ಷ ತೀವ್ರತೆಯನ್ನು ಪಡೆದುಕೊಂಡಿದೆ.
ಶೀರೂರು ಮಠಕ್ಕೆ ಶಿಷ್ಯ ಸ್ವೀಕಾರ ಮಾಡದೇ ಪಟ್ಟದ ದೇವರನ್ನು ಹಿಂದಿರುಗಿಸುವುದಿಲ್ಲ ಎಂದು ಪಲಿಮಾರು ಶ್ರೀಗಳ ನಿಲುವಿಗೆ ಇತರ ಮಠಾಧೀಶರು ಕೂಡಾ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಈ ವಿವಾದ ಮತ್ತಷ್ಟು ಕಗ್ಗಂಟಾಗಿದೆ. ನಿನ್ನೆ ಪೇಜಾರ ಮಠದ ವಿಶ್ವೇಶ ತೀರ್ಥರ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಪಟ್ಟದ ದೇವರನ್ನು ಹಿಂದಿರುಗಿಸಬೇಕಾದರೆ ಶಿಷ್ಯ ಸ್ವೀಕಾರ ಮಾಡಿ ಎಂದು ಲಕ್ಷ್ಮೀವರ ತೀರ್ಥರಿಗೆ ತಾಕೀತು ಮಾಡಿದ್ದಾರೆ.
ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ತಮ್ಮ ಆರೊಗ್ಯ ಹದಗೆಟ್ಟ ಹಿನ್ನೆಯಲ್ಲಿ ದೈಹಿಕ ಪೂಜಾ ಕೈಂಕರ್ಯ ನೆಸವೇರಿಸಲು ಪಟ್ಟದ ದೇವರನ್ನು ಅದಮಾರು ಮಠದ ಕಿರಿಯ ಸ್ವಾಮೀಜಿ ಈಶಪ್ರಿಯ ತೀರ್ಥರ ಸುಪರ್ಧಿಗೆ ವಹಿಸಿದ್ದರು. ಈಗ ಆರೋಗ್ಯ ಸುದಾರಿಸಿದ ಬಳಿಕ ಪಟ್ಟದ ದೇವರನ್ನು ಮರಳಿಸಲು ಲಕ್ಷ್ಮಿವರ ತೀರ್ಥರು ಕೇಳಿದ್ದೇ ವಿವಾದಕ್ಕೆ ನಾಂದಿಮಾಡಿದಂತಾಗಿದೆ. ಈ ಬೆಳವಣಿಗೆಗಳ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪಲಿಮಾರು ಪರ್ಯಾಯ ಸ್ವಾಮಿಜಿಗಳು, ಈ ವಿವಾದದ ಕುರಿತಂತೆ ಶೀಘ್ರವೇ ಇತರ ಮಠಾಧೀಶರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದ್ರು.