Select Your Language

Notifications

webdunia
webdunia
webdunia
webdunia

ಯಲಹಂಕ ವಲಯದ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳ ಪರಿಶೀಲನೆ ನಡೆಸಿದ ಆಯುಕ್ತರು

ಯಲಹಂಕ ವಲಯದ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳ ಪರಿಶೀಲನೆ ನಡೆಸಿದ ಆಯುಕ್ತರು
bangalore , ಮಂಗಳವಾರ, 24 ಜನವರಿ 2023 (19:10 IST)
ಯಲಹಂಕ ವಲಯ ದಾಸರಹಳ್ಳಿ ಮುಖ್ಯ ರಸ್ತೆ(ಅಮೃತ ನಗರ ರಸ್ತೆ) 2.5 ಕಿ.ಮೀ ಇದ್ದು, ಈ ರಸ್ತೆಯನ್ನು ಅಮೃತ ನಗರೋತ್ಥಾನ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರವಾಗಿ ಕೆಲಸ ಪೂರ್ಣಗೊಳಿಸಲು ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯಲ್ಲಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ದಾಸರಹಳ್ಳಿ ಮುಖ್ಯ ರಸ್ತೆಯಲ್ಲಿ ಮಳೆ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಸಲುವಾಗಿ 650 ಮೀಟರ್ ಉದ್ದದ  600 ಎಂ.ಎಂ ಪೈಪ್ ಲೈನ್ ಅಳವಡಿಸುವ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಲು ಮತ್ತು  ಡಾಂಬರೀಕರಣ, ರಸ್ತೆ ಬದಿಯ ಚರಂಡಿ ಅಭಿವೃದ್ಧಿ, ಪಾದಚಾರಿ ಮಾರ್ಗ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಗುಣಮಟ್ಟವನ್ನು ಕಾಪಾಡಿಕೊಂಡು ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
 
ರಸ್ತೆ ಬದಿಯ ಚರಂಡಿಗಳಲ್ಲಿ‌ ತುಂಬಿರುವ ಹೂಳನ್ನು ತೆರವುಗೊಳಿಸಬೇಕು. ಪಾದಚಾರಿ ಮಾರ್ಗದ ಸ್ಲ್ಯಾಬ್ ಹಾಳಾಗಿದ್ದು, ಹೊಸದಾಗಿ ಸ್ಲ್ಯಾಬ್ ಗಳನ್ನು ಅಳವಡಿಸಬೇಕು.  ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ಬರುವ ವಿದ್ಯುತ್ ಕಂಬಗಳಿಂದ ಪಾದಚಾರಿಗಳಿಗೆ ತೊಂದರೆಯಾಗದಂತಿರಬೇಕು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
 
ರಸ್ತೆ ಬದಿ ಕಸದ ಟ್ರಾನ್ಸ್ ಫರ್ ಸ್ಟೇಷನ್ ಇದ್ದು, ಅದರ ಸುತ್ತಲೂ ಶೀಟ್ ಗಳನ್ನು ಅಳವಡಿಸಿಕೊಂಡು ಸುತ್ತಮುತ್ತಲಿನ ಪ್ರದೇಶಕ್ಕೆ ವಾಸನೆ ಬರದಂತೆ ಸೂಕ್ತ ವ್ಯವಸ್ಥೆ ಮಾಡಿಕೊಂಡು ಕಸ ವಿಲೇವಾರಿ ಮಾಡಲು ಘನತ್ಯಾಜ್ಯ ವಿಭಾಗದ ಅಧಿಕಾರಿಗೆ ಸೂಚನೆ ನೀಡಿದರು.
 
ಅಮೃತನಗರ ಮುಖ್ಯ ರಸ್ತೆ ಭಾಗದಲ್ಲಿ ಜಲಮಂಡಳಿಯ ಕಂಟ್ರೋಲ್ ವಾಲ್ ಇದ್ದು,  ಅದನ್ನು ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ಬದಲಿಸಲು ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಿದರು. ಇದೇ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು ರಸ್ತೆ ಬದಿ ಹಾಕಿದ್ದು, ಅದನ್ನು ತೆರವುಗೊಳಿಸಿ ಸಂಬಂಧಪಟ್ಟವರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಅಮೃತಹಳ್ಳಿ ಪೊಲೀಸ್ ಠಾಣೆ ಮುಂಭಾಗ ವಾಹನಗಳು ಪಾರ್ಕಿಂಗ್ ಮಾಡಬಾರದೆಂದು ಬ್ಯಾರಿಕೆಡ್ ಅಳವಡಿಸಿದ್ದು, ಅದನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಿ. ಏನಾದರು ವಾಹನಗಳು ನಿಲ್ಲಿಸಿದರೆ ಸಂಬಂಧಪಟ್ಟ ಮಾಲೀಕರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ರಸ್ತೆ ಬದಿ ವಾಹಗಳನ್ನು ನಿಲ್ಲಿಸಿದಂತಹವರಿಗೆ ಎಚ್ಚರಿಕೆ ನೀಡಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಕೆನ್ನೆತ್ ಜಾರ್ಜ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ 6 ಮತಗಟ್ಟೆಗಳ ಪರಿಶೀಲನೆ ನಡೆಸಿ, ಎಲ್ಲಾ ವ್ಯವಸ್ಥೆಗಳನ್ನು ಸರಿಯಾಗಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
 
ದಾಸರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 6 ಮತಗಟ್ಟೆ ಬರಲಿದ್ದು, ಮುಖ್ಯ ರಸ್ತೆಯಿಂದ ಶಾಲೆಗೆ ಬರುವ ರಸ್ತೆ ಮಾರ್ಗವು ಜಲಮಂಡಳಿಯಿಂದ ರಸ್ತೆ ಅಗೆದಿದ್ದು, ಬಾಕಿ ಕೆಲಸವನ್ನು ಪೂರ್ಣಗೊಳಿಸಿ ಕೂಡಲೆ ರಸ್ತೆ ದುರಸ್ತಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಪರಿಶೀಲನೆಯ ವೇಳೆ ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಕಾರ್ಯಪಾಲಕ ಅಭಿಯಂತರರು, ವಲಯ ಆರೋಗ್ಯಾಧಿಕಾರಿ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಜನ ಏನು ಹೇಳ್ತಾರೆ ಅದನ್ನ ಕೇಳ್ತೀನಿ : ಸುಮಲತಾ