ಬೆಂಗಳೂರು: ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾಗಿ ನೂತನವಾಗಿ ನೇಮಕವಾಗಿರುವ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಬಿ. ವೆಂಕಟ್ ಸಿಂಗ್ ಹಾಗೂ ಡಾ. ಮಹೇಶ್ ವಾಳ್ವೇಕರ್ ಅವರು ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.
ನೂತನವಾಗಿ ನೇಮಕಗೊಂಡಿರುವ ರಾಜ್ಯ ಮಾಹಿತಿ ಆಯುಕ್ತರಿಗೆ ಇಂದು ರಾಜಭವನದ ಬ್ಯಾಂಕ್ವೇಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕಾರ ಪ್ರಮಾಣ ವಚನ ಬೋಧಿಸಿದರು.
ಬೆಂಗಳೂರು ಪೀಠಕ್ಕೆ ನೂತನವಾಗಿ ನೇಮಕವಾಗಿರುವ ರಾಜ್ಯ ಮಾಹಿತಿ ಅಯುಕ್ತರುಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಡಾ. ಮಹೇಶ್ ವಾಳ್ವೇಕರ್ ಅವರು ದೇವರ ಹೆಸರಿನಲ್ಲಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರೆ, ಕಲಬುರಗಿ ಪೀಠಕ್ಕೆ ನೇಮಕವಾಗಿರುವ ಬಿ. ವೆಂಕಟ್ ಸಿಂಗ್ ಅವರು ದೇವರು ಮತ್ತು ಸಂವಿಧಾನದ ಹೆಸರಿನಲ್ಲಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.