Publish Date: Wed, 29 Jan 2025 (19:21 IST)
Updated Date: Wed, 29 Jan 2025 (19:25 IST)
ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇಂದು ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ವರು ಮೃತಪಟ್ಟಿರುವ ಸುದ್ದಿ ಆಘಾತ ಮೂಡಿಸಿದ್ದು, ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ಸಂತಾಪ ಸೂಚಿಸಿದರು.
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲಿನ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕ ಸಾಧಿಸಿ ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ.
144 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ದೇಶದ ಮೂಲೆ ಮೂಲೆಯಿಂದ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದು ಮೌನಿ ಅಮಾವಾಸ್ಯೆಯ ವಿಶೇಷ ದಿನವಾದ ಇಂದು ಸುಮಾರು 10 ಕೋಟಿ ಜನ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮೇಳನ ಎನಿಸಿಕೊಂಡಿರುವ ಇಂತಹ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿರುವ ಕನ್ನಡಿಗರಿಗೆ ನನ್ನ ಕಿವಿಮಾತು. ಕುಂಭ ಮೇಳದಲ್ಲಿ ಪಾಲ್ಗೊಳ್ಳುವಾಗ ಅಲ್ಲಿನ ಸ್ಥಳೀಯ ಆಡಳಿತ, ಪೊಲೀಸ್ ಸಿಬ್ಬಂದಿಗಳು ಮತ್ತು ಆಯೋಜಕರು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಅವರಿಗೆ ಸಹಕರಿಸಿ. ಯಾವುದೇ ಗಾಳಿ ಸುದ್ದಿಗಳಿಗೆ, ಊಹಾಪೋಹಗಳಿಗೆ ಕಿವಿಗೊಡಬೇಡಿ. ನಿಮ್ಮೊಡನೆ ಪ್ರಯಾಣ ಮಾಡಿರುವ ಸ್ನೇಹಿತರು ಅಥವಾ ಕುಟುಂಬಸ್ಥರ ಗುಂಪಿನ ಜೊತೆಗಿರಿ. ಸಣ್ಣ ಮಕ್ಕಳು, ವಯಸ್ಸಾದವರು ಜೊತೆಗಿದ್ದರೆ ಅವರ ಮೇಲೆ ವಿಶೇಷ ಗಮನ ಕೊಡಿ. ಪ್ರತಿಯೊಬ್ಬರಿಗೂ ಪುಣ್ಯ ಸ್ನಾನ ಮಾಡುವ ಅವಕಾಶ ಕಲ್ಪಿಸಲು ಅಲ್ಲಿನ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿದೆ. ಆದ್ದರಿಂದ ಯಾರೂ ಆತುರ ಪಡದೆ, ಗಡಿಬಿಡಿ ಮಾಡಿಕೊಳ್ಳದೆ ಪವಿತ್ರ ಸ್ನಾನ ಮಾಡಿ ಸುರಕ್ಷಿತವಾಗಿ ಹಿಂತಿರುಗಿ ಬನ್ನಿ.