Publish Date: Thu, 16 Feb 2023 (13:41 IST)
Updated Date: Thu, 16 Feb 2023 (13:45 IST)
ಆಸ್ತಿ ವಿಚಾರಕ್ಕೆ ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿದೆ. ನಾರಾಯಣಸ್ವಾಮಿ ಕೊಲೆಯಾದ ತಂದೆ. ಆರೋಪಿ ಮಣಿಕಂಠ ಸುಪಾರಿ ನೀಡಿರುವ ಪುತ್ರ. ಬೆಂಗಳೂರಿನ ಮಾರತ್ತಹಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಕಂಠ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದು 2ನೇ ವಿವಾಹವಾಗಿದ್ದ, ಒಬ್ಬ ಹೆಣ್ಣು ಮಗಳಿದ್ದಳು. ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಗೊತ್ತಾಗಿ ಎರಡನೇ ಪತ್ನಿ ಪತಿಯಿಂದ ದೂರವಿದ್ದಳು. ವಿಚ್ಛೇದನ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು. ಆದರೆ ವಿಚ್ಛೇದನ ಕೊಡುವುದು ಬೇಡ ಎಂದು ಮಾವ ನಾರಾಯಣಸ್ವಾಮಿ ಕೇಳಿಕೊಂಡಿದ್ದ. ಆದರೆ ಇದಕ್ಕೆ ಸೊಸೆ ಒಪ್ಪಲಿಲ್ಲ. ಹೀಗಾಗಿ ವಿಚ್ಛೇದನ ಬಳಿಕ ಸೊಸೆ ಹಾಗೂ ಮೊಮ್ಮಗಳಿಗೆ ಕಷ್ಟವಾಗಬಹುದು, ಅವರ ಜೀವನ ನಿರ್ವಹಣೆ ಕಷ್ಟ ಆಗುತ್ತೆ ಎಂದು ಸೈಟ್ವೊಂದನ್ನ ಅವರ ಹೆಸರಿಗೆ ಮಾಡಲು ಮಾವ ನಾರಾಯಣಸ್ವಾಮಿ ಮುಂದಾಗಿದ್ದ. ಆದರೆ ಇದು ಮಣಿಕಂಠನಿಗೆ ಇಷ್ಟವಿರಲಿಲ್ಲ. ಹೀಗಾಗಿ ತಂದೆ ಕೊಲೆಗೆ ಮಗ ಮಣಿಕಂಠ ಸುಪಾರಿ ನೀಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಸುಪಾರಿ ಪಡೆದವರು ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಣತ್ತೂರಿನ ಕಾವೇರಪ್ಪ ಲೇಔಟ್ನಲ್ಲಿ ನಾರಾಯಣಸ್ವಾಮಿಯನ್ನು ಕೊಂದು ಪರಾರಿಯಾಗಿದ್ದಾರೆ. ಸದ್ಯ ಮಾರತ್ತಹಳ್ಳಿ ಪೊಲೀಸರು ಮಣಿಕಂಠನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.