Publish Date: Tue, 06 May 2025 (18:55 IST)
Updated Date: Tue, 06 May 2025 (18:58 IST)
ಬೆಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಬಜ್ಪೆ ಠಾಣೆಯ ಹೆಡ್ಕಾನ್ಸ್ಟೇಬಲ್ ರಶೀದ್ ಕೂಡ ಭಾಗಿಯಾಗಿರುವ ಅನುಮಾನವನ್ನು ಬಿಜೆಪಿ ವ್ಯಕ್ತಪಡಿಸಿದೆ.
ಈ ಬಗ್ಗೆ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ನಿಷೇಧಿತ ಪಿಎಫ್ಐ ಸಂಘಟನೆಯ ಕೈವಾಡವಿದೆ. ಇದಕ್ಕಾಗಿ ವಿದೇಶದಿಂದ 50 ಲಕ್ಷ ರೂಪಾಯಿ ಹಣ ಹೂಡಿಕೆಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ಒಂದು ತಿಂಗಳಿನಿಂದ ಸುಹಾಸ್ ಹಿಂದೆ ಬಿದ್ದಿದ್ದ ಬಜ್ಪೆ ಠಾಣೆಯ ಹೆಡ್ ಕಾನ್ಸ್ಟೇಬಲ್ ರಶೀದ್ ಕೂಡಾ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.
ಕೃತ್ಯಕ್ಕಾಗಿ ರೂ. 50 ಲಕ್ಷಕ್ಕೂ ಹೆಚ್ಚು ಮೊತ್ತದ ಹಣ ಹೂಡಿಕೆಯಾಗಿದ್ದು, ಇದರ ಹಿಂದೆ ದೊಡ್ಡ ಶಕ್ತಿ ಕೆಲಸ ಮಾಡಿದೆ. ಪಿಎಫ್ಐನ ಟಾರ್ಗೆಟೆಡ್ ಕಿಲ್ಲಿಂಗ್ ಈ ಪ್ರಕರಣದಲ್ಲೂ ನಡೆದಿದೆ. ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ನೌಷಾದ್ ಈ ಪ್ರಕರಣಕ್ಕೆ ಫಂಡಿಂಗ್ ಮಾಡಿದ್ದಾನೆ ಎನ್ನಲಾಗಿದೆ. ಇದರಲ್ಲಿ ಎಂಟು ಜನರು ನೇರ ಭಾಗಿಯಾಗಿದರೆ, ನೂರಾರು ಜನ ಪರೋಕ್ಷವಾಗಿ ಭಾಗಿಯಾಗಿರುವ ಸಾಧ್ಯತೆಯಿದೆ. ಸುಹಾಸ್ ಚಲನವಲನದ ಮಾಹಿತಿದಾರರಿಂದ ಹಿಡಿದು ಕಾರು ಹತ್ತಿಸಿದ ಬುರ್ಖಾಧಾರಿ ಮಹಿಳೆಯ ವಿಚಾರಣೆ ಸಹ ನಡೆಸಬೇಕು. ಸುಹಾಸ್ ಕೊಲೆಯಾದ ಕೆಲ ನಿಮಿಷಗಳಲ್ಲಿ ದೇಶ - ವಿದೇಶಗಳಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ನಡೆಸುವ ಏಕರೀತಿಯ ಕಮೆಂಟ್ಗಳು ಬಂದಿವೆ. ಹಾಗಾಗಿ ಇದೊಂದು ವ್ಯವಸ್ಥಿತವಾಗಿ ಸಂಚು ರೂಪಿಸಿ ನಡೆಸಿದ ಭಯೋತ್ಪಾದನಾ ಕೃತ್ಯ.
ಕರ್ನಾಟಕದಲ್ಲಿ ಅತಿ ಹೆಚ್ಚು ಮುಸ್ಲಿಮರು ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಸ್ಲಾಮಿಕ್ ಮೂಲಭೂತವಾದವನ್ನು ಹೇರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, ಇದಕ್ಕೆ ಅಡ್ಡಿಯಾಗಿರುವ ಹಿಂದು ಕಾರ್ಯಕರ್ತರ ಸರಣಿ ಹತ್ಯೆಯಾಗುತ್ತಿದೆ. ಹಾಗಾಗಿ @INCKarnataka
ಸರ್ಕಾರ ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ಒಪ್ಪಿಸಬೇಕು. ಇಲ್ಲದಿದ್ದರೆ ಕರಾವಳಿ ಕರ್ನಾಟಕದಲ್ಲಿ ಶಾಂತಿ ನೆಲೆಸುವುದು ಅಸಾಧ್ಯ.