Publish Date: Wed, 30 Jan 2019 (19:34 IST)
Updated Date: Wed, 30 Jan 2019 (19:36 IST)
ಹುಡುಗಿಯೊಬ್ಬಳ ಪ್ರೀತಿಸುವ ವಿಚಾರದಲ್ಲಿ ಉಂಟಾದ ದ್ವೇಷದಿಂದ ಸಹಪಾಠಿಯನ್ನು ಪಿಯುಸಿ ವಿದ್ಯಾರ್ಥಿಯೊಬ್ಬ ಹಾಡುಹಗಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.
ಬೆಂಗಳೂರಿನ ಬಾಗಲಗುಂಟೆಯ ಸೌಂದರ್ಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಸೌಂದರ್ಯ ಕಾಲೇಜಿನ ಶೌಚಾಲಯದಲ್ಲಿ ಬೆಳಿಗ್ಗೆ 8.30ರ ವೇಳೆ ನಡೆದ ಕೊಲೆಯಿಂದ ಕಾಲೇಜು ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ.
ಸೌಂದರ್ಯ ಕಾಲೇಜಿನಲ್ಲಿ 2ನೇ ವರ್ಷದ ಪಿಯುಸಿ (ವಾಣಿಜ್ಯ) ಓದುತ್ತಿದ್ದ ದಯಾಸಾಗರ್ (18) ಕೊಲೆಯಾಗಿದ್ದು, ಕೃತ್ಯವೆಸಗಿದ ಆತನ ಸಹಪಾಠಿ ರಕ್ಷಿತ್ (18)ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿ ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ಅಪ್ರಾಪ್ತ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಕೊಲೆ ಕೃತ್ಯ ನಡೆದಿರುವ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೊಲೀಸ್ ಇನ್ಸ್ಪೆಕ್ಟರ್ ಶಿವುಸ್ವಾಮಿ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.