Publish Date: Fri, 22 Sep 2017 (16:43 IST)
Updated Date: Fri, 22 Sep 2017 (16:46 IST)
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸಚಿವ ಆಂಜನೇಯಗೆ ವಿದ್ಯಾರ್ಥಿನಿಯೊಬ್ಬಳು ಸವಾಲು ಹಾಕಿದ ಘಟನೆ ನಡೆದಿದೆ. ಸರ್ಕಾರಿ ಶಾಲೆಗಳನ್ನ ನಿರ್ಲಕ್ಷಿಸಲಾಗುತ್ತಿದೆ ಎಂದು ಭಾಷಣ ಬಿಗಿದಿದ್ದ ಸಚಿವರಿಗೆ ಮುಖಾಮುಖಿಯಾದ ವಿದ್ಯಾರ್ಥಿನಿ ಒಳ್ಳೆಯ ಮೂಲಭೂತ ಸೌಕರ್ಯ ಕೊಡಿ, ನಿಮ್ಮ ಮಕ್ಕಳನ್ನೂ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಸವಾಲು ಹಾಕಿದ್ದಾರೆ.
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಚಿವರು, ಸರ್ಕಾರಿ ಶಾಲೆಯಲ್ಲಿ ಓದಿದ ವಿಶ್ವೇಶ್ವರಯ್ಯ ವಿಶ್ವವಿಖ್ಯಾತ ಇಂಜಿನಿಯರ್ ಆದರು. ಸರ್ಕಾರಿ ಶಾಲೆಯಲ್ಲಿ ಓದಿದವರು ಸಂವಿಧಾನ ರಚಿಸಿದರು. ಸಿಎಂ ಸಿದ್ದರಾಮಯ್ಯ ಸಹ ಸರ್ಕಾರಿ ಶಾಲೆಯಲ್ಲಿ ಓದಿದವರೇ. 1,2,3,4 ಓದಿಲ್ಲ ನೇರ 5ನೇ ತರಗತಿಗೆ ಸೇರಿ ಬಿಎಸ್`ಸಿ ಓದಿ ಲಾಯರ್ ಆಗಿದ್ದರು ಎಂದು ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಆದರೆ, ಸರ್ಕಾರಿ ಶಾಲೆಗಳನ್ನ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮಕ್ಕಳನ್ನ ಸೇರಿಸಲು ಮುಂದೆ ಬರುತ್ತಿಲ್ಲ ಎಂದು ಹೇಳಿದರು.
ಭಾಷಣ ಮುಗಿಸಿ ಬಂದ ಸಚಿವರಿಗೆ ಮುಗಿಸಿ ಬಂದ ಸಚಿವರಿಗೆ ಮುಖಾಮುಖಿಯಾದ ವಿದ್ಯಾರ್ಥಿನಿ ನಯನಾ, ಸರಕಾರಿ ಶಾಲೆಗೆ ರಾಜಕಾರಣಿಗಳು, ಸರ್ಕಾರಿ ಕೆಲಸಗಾರರನ್ನ ಸೇರಿಸಬೇಕೆಂಬ ನಿಯಮ ಜಾರಿ ಮಾಡಿ, ಅವಾಗ ಶಾಲೆಗಳು ಉದ್ಧಾರ ಆಗುತ್ತೇವೆ ಎಂದರು. ನೀನು ಯಾವ ಶಾಲೆಯಲ್ಲಿ ಓದುತ್ತಿದ್ದೀಯಾ ಎಂದು ಸಚಿವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಯನಾ, ನಾನು ಖಾಸಗಿ ಶಾಲೆಯಲ್ಲಿ ಓದುತ್ತಿದ್ದೇನೆ. ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯ ಕೊಡಿ ನಾನು ನನ್ನ ಜೊತೆಗಿರುವ 30 ವಿದ್ಯಾರ್ಥಿಗಳು ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗೆ ಸೇರುತ್ತೇವೆಂದು ಸವಾಲು ಹಾಕಿದರು. ವಿದ್ಯಾರ್ಥಿನಿ ಮಾತನ್ನ ಆಲಿಸಿದ ಸಚಿವರು ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆಂದು ಹೇಳಿ ಹೊರಟರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ