Publish Date: Sun, 30 Sep 2018 (19:15 IST)
Updated Date: Sun, 30 Sep 2018 (19:19 IST)
ಆತ ವೃದ್ಧ ತಂದೆ, ತಾಯಿ ಹಾಗೂ ಪತ್ನಿ, ಮೂವರು ಮಕ್ಕಳಿಗೆ ಆಸರೆಯಾಗಿದ್ದವನು. ಕುಟುಂಬ ನಿರ್ವಹಣೆಗೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದ. ಆತ ಪ್ರತಿನಿತ್ಯ ಪತ್ನಿಗೆ ಫೋನ್ ಮಾಡಿ ಮಾತನಾಡುತ್ತಿದ್ದ. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಫೋನ್ ಬಾರದ ಪತ್ನಿಗೆ ಬಂದ ಆ ಒಂದು ಕಾಲ್ ಅವರ ಬಾಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸುಂಬಡ ಗ್ರಾಮದ ನಿವಾಸಿಯಾಗಿರುವ ಕವಿತಾ ಪತಿ ಗೊಲ್ಲಾಳಪ್ಪ ಕಳೆದ 20 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರಂತೆ. ಪ್ರತಿನಿತ್ಯ ಪತ್ನಿ ಕವಿತಾಗೆ ಫೋನ್ ಮಾಡುತ್ತಿದ್ದ ಗೊಲ್ಲಾಳಪ್ಪ, ಕಳೆದ ನಾಲ್ಕು ದಿನಗಳಿಂದ ಕರೆ ಮಾಡಿರಲಿಲ್ಲವಂತೆ. ಸಂಜೆ 4 ಗಂಟೆಗೆ ದುಬೈನಿಂದ ಕರೆ ಮಾಡಿದ್ದ ವ್ಯಕ್ತಿ ಗೊಲ್ಲಾಳಪ್ಪ 'ಮರ್ ಗಯಾ.. ಮರ್ ಗಯಾ' ಅಂತಾ ಹೇಳಿದ್ದಾರಂತೆ.
ಇನ್ನು ಗೊಲ್ಲಾಳಪ್ಪ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಕಲಬುರಗಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ್ ತೆಗ್ಗೆಳ್ಳಿಗೆ ಮನವಿ ಸಲ್ಲಿಸಿರುವ ಕುಟುಂಬಸ್ಥರು, 'ಸೌದಿ ಅರೇಬಿಯಾದ ಜಿದ್ದಾ ನಗರದ ಪ್ರಾಣ ಎಂಬ ಕಂಪನಿಯಲ್ಲಿ ಗೊಲ್ಲಾಳಪ್ಪ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ" ಅಂತಾ ಉಲ್ಲೇಖಿಸಿದ್ದಾರೆ. ಗೊಲ್ಲಾಳಪ್ಪ ಮೃತಪಟ್ಟು ಮೂರು ದಿನಗಳಾದರೂ ಗೊಲ್ಲಾಳಪ್ಪ ದುಡಿಯುತ್ತಿದ್ದ ಕಂಪನಿಯ ಮಾಲೀಕರಿಗೆ ಗೊತ್ತಾಗಿಲ್ಲವಂತೆ. ತನ್ನ ಗಂಡ ಹೇಗೇ ಮೃತಪಟ್ಟಿದ್ದಾನೆಂಬುದು ನಿಗೂಢವಾಗಿದೆ. ತನ್ನ ಗಂಡನ ಸಾವಿಗೆ ಏನೆಂಬುದನ್ನು ಪತ್ತೆ ಹಚ್ಚಬೇಕು ಹಾಗೂ ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡಬೇಕೆಂದು ಮನವಿ ಮಾಡಲಾಗಿದೆ. ಇನ್ನು ನಾಲ್ಕು ತಿಂಗಳ ಹಿಂದಷ್ಟೇ ಬಂದಿದ್ದ ಮಗ ಗೊಲ್ಲಾಳಪ್ಪ ಮೃತಪಟ್ಟಿದ್ದಾನೆ ಅವನ ಮೃತದೇಹವನ್ನಾದರೂ ತಂದು ಕೊಡಿ ಎಂದು ತಂದೆ ಹಣಮಂತರಾಯ ಕಣ್ಣೀರಿಡುತ್ತಿದ್ದಾರೆ.