Publish Date: Wed, 08 Jan 2025 (11:37 IST)
Updated Date: Wed, 08 Jan 2025 (11:40 IST)
ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಲು ಪ್ಲ್ಯಾನ್ ಮಾಡುತ್ತಿದ್ದರೆ ರೈಲ್ವೇಸ್ ಗುಡ್ ನ್ಯೂಸ್ ನೀಡಿದೆ. ಕೆಲವು ವಿಶೇಷ ರೈಲು ಘೋಷಣೆ ಮಾಡಿದೆ.
ಮಕರ ಸಂಕ್ರಾಂತಿ ಸಂದರ್ಭದಲ್ಲಿ ಸಾಲು ಸಾಲು ರಜೆಯಿದ್ದು, ಈ ಕಾರಣಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನಿಂದ ತಮ್ಮ ಊರುಗಳ ಕಡೆಗೆ ಹೋಗುತ್ತಾರೆ. ಹೀಗಾಗಿ ಸಹಜವಾಗಿಯೇ ಬಸ್, ರೈಲು ಸೇರಿದಂತೆ ಎಲ್ಲಾ ಕಡೆ ಸಂಚಾರ ದಟ್ಟಣೆ ಸಹಜವಾಗಿರುತ್ತದೆ.
ಪ್ರಯಾಣಿಕರ ಸಮಸ್ಯೆ ನೀಗಿಸಲು ನೈಋತ್ಯ ರೈಲ್ವೇ ಎರಡು ವಿಶೇಷ ರೈಲು ಘೋಷಿಸಿದೆ. ಬೆಂಗಳೂರು ಮತ್ತು ಚೆನ್ನೈ ನಡುವೆ ಮತ್ತು ಬೆಂಗಳೂರು ಮತ್ತು ಮೈಸೂರು ನಡುವೆಯೂ ವಿಶೇಷ ರೈಲು ಘೋಷಣೆ ಮಾಡಿದೆ.
ರೈಲು ಸಂಖ್ಯೆ 07319 ಜನವರಿ 10 ರಂದು ಬೆಳಿಗ್ಗೆ 08.05 ಕ್ಕೆ ಬೆಂಗಳೂರಿನಿಂದ ಹೊರಟು ಅದೇ ದಿನ ಅಪರಾಹ್ನ 2.40 ಕ್ಕೆ ಚೆನ್ನೈ ತಲುಪಲಿದೆ. 07320 ಕ್ರಮ ಸಂಖ್ಯೆಯ ರೈಲು ಜನವರಿ 10 ರಂದು ಮಧ್ಯಾಹ್ನ 3.40 ಕ್ಕೆ ಚೆನ್ನೈನಿಂದ ಹೊರಟು ರಾತ್ರಿ 10.50 ಕ್ಕೆ ಬೆಂಗಳೂರು ತಲುಪಲಿದೆ.
06569 ಎಂಸ್ಎಂವಿಟಿ ಬೆಂಗಳೂರು-ತೂತುಕುಡಿ ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ 10 ರಂದು ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಹೊರಟು ಜನವರಿ 11 ರಂದು ಬೆಳಿಗ್ಗೆ 11 ಗಂಟೆಗೆ ತೂತುಕುಡಿಗೆ ತಲುಪಲಿದೆ.
06570 ಕ್ರಮ ಸಂಖ್ಯೆಯ ರೈಲು ಜನವರಿ 11 ರಂದು ಮಧ್ಯಾಹ್ನ 1.00 ಗಂಟೆಗೆ ತೂತುಕುಡಿಯಿಂದ ಹೊರಟು ಜನವರಿಗೆ 12 ರಂದು ಬೆಳಿಗ್ಗೆ 6.30 ಕ್ಕೆ ಮೈಸೂರಿಗೆ ತಲುಪಲಿದೆ. ಹೆಚ್ಚಿನ ಮಾಹಿತಿಗೆ ಭಾರತೀಯ ರೈಲ್ವೇ ವೆಬ್ ಸೈಟ್ ಗೆ ಭೇಟಿ ನೀಡಬಹುದು.