Publish Date: Thu, 31 Dec 2020 (09:48 IST)
Updated Date: Thu, 31 Dec 2020 (09:49 IST)
ಬೆಂಗಳೂರು: ಆಸ್ತಿ ಸಂಬಂಧ ಕಲಹವಾಗಿ ತಂದೆಯನ್ನೇ ಡ್ರಗ್ ವ್ಯಸನಿ ಮಗ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಭಾರತೀ ನಗರ ವ್ಯಾಪ್ತಿಯಲ್ಲಿ ನಡೆದಿದೆ.
ಆರ್ ಬಿಐ ಲೇಔಟ್ ನಿವಾಸಿ ಅಮರನಾಥ್ (62) ಹತ್ಯೆಗೀಡಾದವರು. ನಿವೃತ್ತ ಅಧಿಕಾರಿಯಾಗಿದ್ದ ಅಮರ್ ನಾಥ್ ಅವರ ಪುತ್ರ 21 ವರ್ಷದ ಮನಾಂಕ್ ನಿಂದ ಹತ್ಯೆಗೀಡಾಗಿದ್ದಾರೆ. ಇಬ್ಬರೂ ಮುಂಬೈನಲ್ಲಿ ನೆಲೆಸಿದ್ದರು. ಆದರೆ ಇಲ್ಲಿ ಮನೆ ಕಟ್ಟಿಸಲು ಬೆಂಗಳೂರಿಗೆ ಬಂದು ನೆಲೆಸಿದ್ದರು. ಕಳೆದ ಕೆಲವು ತಿಂಗಳುಗಳಿಂದ ವಿಪರೀತ ಮಾದಕ ವಸ್ತುಗಳ ದಾಸನಾಗಿದ್ದ ಮನಾಂಕ್ ತನಗೆ ಚಿಕಿತ್ಸೆ ನೀಡುತ್ತಿದ್ದ ಆಪ್ತ ಸಮಾಲೋಚಕರ ಬಳಿಯೂ ತಂದೆ-ತಾಯಿಯನ್ನು ಕೊಂದರೆ ಆಸ್ತಿ ತನಗೆ ಸಿಗುತ್ತದಲ್ಲವೇ ಎಂದು ಪ್ರಶ್ನಿಸಿದ್ದ. ಈ ವಿಚಾರ ತಂದೆಯ ಕಿವಿಗೂ ಬಿದ್ದಿತ್ತು. ಆದರೆ ಅದನ್ನು ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಂಗಳವಾರ ರಾತ್ರಿ ತಂದೆಯ ಮೇಲೆ ಬಿಸಿ ನೀರೆರಚಿ ಪ್ರಜ್ಞೆ ತಪ್ಪಿಸಿದ ಆರೋಪಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮನೆಗೆ ಬಂದ ಆಪ್ತಸಮಾಲೋಚಕರು ಇಬ್ಬರ ಸ್ಥಿತಿ ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.