Publish Date: Fri, 04 Jan 2019 (18:51 IST)
Updated Date: Fri, 04 Jan 2019 (18:52 IST)
ರಾಜ್ಯ ವ್ಯಾಪ್ತಿ ಧೂಮಪಾನ ಸೇವನೆಯನ್ನು ಸಂಪೂರ್ಣ ನಿಷೇಧ ಮಾಡುವ ಸಂಬಂಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ ಎಂದು ಉಪಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.
ಬೆಂಗಳೂರು ನಗರದಲ್ಲಿಂದು ಮಲ್ಲೇಶ್ವರ ಬಿಬಿಎಂಪಿ ಕಚೇರಿಯಲ್ಲಿ ಧೂಮಪಾನ ಮುಕ್ತ ಬೆಂಗಳೂರು ಅಭಿಯಾನದ ವರದಿ ಹಾಗೂ ಮೊಬೈಲ್ ಆಫ್ ಬಿಡುಗಡೆ ಮಾಡಿ ಮಾತನಾಡಿದರು.
ಗುಜರಾತ್ ರಾಜ್ಯದಲ್ಲಿ ಲಿಕ್ಕರ್ ಬ್ಯಾನ್ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಸಿಗರೇಟು ಸೇವನೆ ಬ್ಯಾನ್ ಮಾಡಬಹುದೇ ಪರಿಶೀಲಿಸಿ. ಇನ್ನೂ, ಇದರಿಂದ ಪೊಲೀಸರಿಗೆ ಹೆಚ್ಚು ಶ್ರಮ ಆಗಬಹುದು. ಆದರೆ ಜನರಲ್ಲಿ ಪ್ರಬಲವಾಗಿ ಅರಿವು ಮೂಡಿಸಲು ಸಹಕಾರಿಯಾಗಲಿದೆ ಎಂದರು.
ಡ್ರಗ್ ನಿಯಂತ್ರಣ ಮಾಡಲು ರಾಜ್ಯದೆಲ್ಲೆಡೆ ದೊಡ್ಡ ಮಟ್ಟದ ಅಭಿಯಾನ ಮಾಡಲಾಗುತ್ತಿದೆ. ಅದರಲ್ಲೂ ಕಾಲೇಜು ಆವರಣಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅಭಿಯಾನ ಯಶಸ್ವಿಯಾಗಿದೆ.
ಈ ಅಭಿಯಾನದಲ್ಲೇ ಸಿಗರೇಟು ಸೇವನೆ ಸೇರಿಸಿ, ಕನಿಷ್ಠ ಪಕ್ಷ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇವನೆಯಿಂದ ದೂರ ಉಳಿಯುವಂತೆ ಮಾಡಬೇಕಿದೆ. ಕಾಲೇಜು ಸಮೀಪ ಸಿಗರೇಟು ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಿಸಿ ಎಂದು ಹೇಳಿದರು.