Publish Date: Sun, 08 Jul 2018 (18:11 IST)
Updated Date: Sun, 08 Jul 2018 (18:18 IST)
ಒಂದು ವರ್ಷ ಸರಕಾರವಿರುತ್ತದೆಂದು ಕುಮಾರಸ್ವಾಮಿ ಹೇಳಿದರೆ 6 ತಿಂಗಳು ಇರುತ್ತದೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ನೀಡಿದ ಕಷಾಯವನ್ನು ಇನ್ನೂ ಕೂಡ ಕುಮಾರಸ್ವಾಮಿ ಜೀರ್ಣಿಸಲು ಆಗಿಲ್ಲ. ಈ ಸರಕಾರ ಬಹಳಷ್ಟು ದಿನ ಬದುಕುವುದು ಕಷ್ಟವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರದ ಬಿಜೆಪಿ ಕಚೇರಿಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಣಾಳಿಕೆಯಲ್ಲಿ ಹೇಳಿದಂತೆ ಸಂದ್ಯಾ ಸುರಕ್ಷ, ವ್ರದ್ಧಾಪ್ಯ ವೇತನ ವಿಚಾರ ಮರೆತಿದ್ದಾರೆ. ಇಂದಿರಾ ಕ್ಯಾಂಟಿನ್ ಮುಂದುವರೆಸುವುದಾಗಿ ಹೇಳಿದ್ದು ಬಹಳಷ್ಟು ಇಂದಿರಾ ಕ್ಯಾಂಟಿನ್ ನಡೆಯುತ್ತಿಲ್ಲ. ಬಜೆಟಿನಲ್ಲಿ ಕೊಟ್ಟ ಭರವಸೆ, ಹೇಳಿಕೆ ಮರೆತ ಸರಕಾರವು ನಿಷ್ಕ್ರೀಯವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೂ ಸತ್ತಿದೆ. ಸರಕಾರ ಇದನ್ನು ತಿದ್ದಿಕೊಳ್ಳದಿದ್ದಲ್ಲಿ ಸದನದ ಒಳಗೂ ಮತ್ತು ಹೊರಗು ಪ್ರತಿಭಟನೆ ನಡೆಸುವ ಕಾರ್ಯಕ್ರಮ ನಿಶ್ಚಿತ ಎಂದರು.
ಹೆಬ್ರಿ ಪೊಲೀಸ್ ಉಪನಿರೀಕ್ಷಕ ರಾಜಿನಾಮೆ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಗ್ರಹಮಂತ್ರಿಗಳಿಗೆ ಪತ್ರ ಬರೆದಿದ್ದು ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವ ಕಾರ್ಯವಾಗುವುದು ತಪ್ಪು. ಅಧಿಕಾರಿ ತಪ್ಪು ಮಾಡಿದರೇ ಅದನ್ನು ಇಲಾಖೆ ತನಿಖೆಯ ಮೂಲಕ ಸರಿಪಡಿಸುವ ವ್ಯವಸ್ಥೆಯಿದೆ. ಆದರೇ ಸ್ವಯಂಪ್ರೇರಿತವಾಗಿ ಠಾಣಾಧಿಕಾರಿ ರಾಜಿನಾಮೆ ನೀಡಿದರೇ ಸರಕಾರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಾದರೂ ಯಾರು? ಎಂಬ ಬಗ್ಗೆ ಇನ್ನೂ ಕೂಡ ಧ್ವನಿಯೆತ್ತುವೆ ಎಂದರು.
ಬಜೇಟಿನಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಕಡೆಗಣನೆಯಾಗಿದೆ. ಎತ್ತಿನಹೊಳೆಗೆ ಅನುದಾನ ನೀಡಿದ್ದು ಈ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ಆ ಯೋಜನೆಯಿಂದ ಬಾದಕವಾಗುವ ಉಡುಪಿ, ಮಂಗಳೂರು ಜಿಲ್ಲೆಗೆ ಯಾವುದೇ ಅನುದಾನ ನೀಡದಿರುವುದು ಸರಿಯಲ್ಲ. ಕೂಡಲೇ ವಾರಾಹಿ ಯೋಜನೆಗೆ 250-500 ಕೋಟಿ ನೀಡಿ ಯೋಜನೆ ಉಡುಪಿಗೆ ತಲುಪವಷ್ಟರ ಮಟ್ಟಿಗೆ ಭೂಸ್ವಾಧೀನ ಮೊದಲಾದ ಕೆಲಸ ಆಗಲು ವ್ಯವಸ್ಥೆ ಕಲ್ಪಿಸಬೇಕಿದೆ. ಉಡುಪಿ ಜಿಲ್ಲೆಗೆ ಇನ್ನೂ ಕೂಡ ಉಸ್ತುವಾರಿ ಸಚಿವರನ್ನು ನೇಮಿಸದಿರುವುದು ನಿಜಕ್ಕೂ ದುರಂತವಾಗಿದೆ. ನೆರೆ, ಮಳೆಹಾನಿ ಬಡವರ ಮನೆ ಬಿದ್ದರೆ ಅದಕ್ಕೆ 1 ಸಾವಿರ ನೀಡುವುದಲ್ಲ, ಬದಲಾಗಿ ಅದರ ಪೂರ್ಣ ವೆಚ್ಚ ನೀಡಬೇಕಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ ಮಾತನಾಡುವೆ ಎಂದರು.