Publish Date: Tue, 20 Aug 2024 (14:53 IST)
Updated Date: Tue, 20 Aug 2024 (14:56 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಕೇಸ್ ವಿಚಾರಣೆ ಬಗ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದು, ಸಿದ್ದರಾಮಯ್ಯ ದಲಿತರನ್ನು ರಕ್ಷಾ ಕವಚವಾಗಿ ಮಾಡಿದ್ದಾರೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ನಿರಪರಾಧಿ ಎಂದು ಸಾಬೀತುಪಡಿಸುವ ಬದಲಾಗಿ ಹಿಂದುಳಿದವರು ಎಂಬ ರಕ್ಷಣಾ ಕವಚದಡಿ ಆಶ್ರಯ ಪಡೆಯಲೆತ್ನಿಸುತ್ತಿದ್ದಾರೆ ಎಂದು ಟೀಕಿಸಿದರು. ಸದನದಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಕೊಡಬೇಕಿತ್ತು. ಇನ್ನೂ ಒಂದು ದಿನ ಸದನ ಇದ್ದರೂ ನೀವ್ಯಾಕೆ ಓಡಿ ಹೋದಿರಿ ಎಂದು ಕೇಳಿದರು.
ನಾವು ಜನರಿಗೆ ಮನವರಿಕೆ ಮಾಡಲು ಪಾದಯಾತ್ರೆ ಮಾಡಿದೆವು. ಆದರೆ, ನೀವ್ಯಾಕೆ ನಮ್ಮಿಂದ ಮುಂಚೆ ಹೋಗಿ ನಾನು ಕಳ್ಳನಲ್ಲ; ನನ್ನಲ್ಲಿ ಕಪ್ಪು ಚುಕ್ಕಿ ಇಲ್ಲ ಎಂದು ಹೇಳಿದ್ದೀರಿ ಎಂದು ಕೇಳಿದರು. ನೀವು ಹಿಂದೆ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೀರಲ್ಲವೇ? ಎಂದರಲ್ಲದೆ, ನಮ್ಮ ತಪ್ಪಿಲ್ಲದ ಕಾರಣ ಹಿಂದೆ ಹಿಂದೆ ಬಂದು ನಾವು ಉತ್ತರ ಕೊಟ್ಟೆವಾ ಎಂದು ಪ್ರಶ್ನಿಸಿದರು.
ಕೋವಿಡ್ ಮಹಾಮಾರಿ ಇದ್ದರೂ ಕಾಂಗ್ರೆಸ್ಸಿಗರು ಮೇಕೆದಾಟು ಪಾದಯಾತ್ರೆ ಮಾಡಿ ನಾಟಕ ಪ್ರದರ್ಶನ ಮಾಡಿದ್ದಾಗಿ ಆಕ್ಷೇಪಿಸಿದರು. ಆದರೂ ನಾವು ಅಡ್ಡಿ ಮಾಡಲಿಲ್ಲ ಎಂದರಲ್ಲದೆ, ಹಿಂದುಳಿದ ಸಮಾಜಕ್ಕೆ ಸೇರಿದ ಪ್ರಾಮಾಣಿಕ ಪ್ರಧಾನಿಯವರ ರಾಜೀನಾಮೆ ಕೇಳುತ್ತೀರಲ್ಲವೇ? ಅವರನ್ನು ಫೂಲ್ ಎನ್ನುತ್ತೀರಲ್ಲವೇ? ನಿಮಗೆ ಆ ಪ್ರಜ್ಞೆ ಇಲ್ಲವೇ ಎಂದು ಕೇಳಿದರು. ಗೌರವಾನ್ವಿತ ರಾಷ್ಟçಪತಿಗಳನ್ನು ಅವಳು ಎಂದು ಮಾತನಾಡಿದ್ದೀರಲ್ಲವೇ ಎಂದು ಆಕ್ಷೇಪಿಸಿದರು.
ಒಂದು ವರ್ಷದ ಬಳಿಕ ಎಫ್ಐಆರ್
ನಿಮ್ಮ ಹಗರಣಗಳ ತನಿಖೆ ಆಗುವುದು ಬೇಡವೇ ಎಂದು ಕೇಳಿದರು. ರಾಜೀನಾಮೆ ಕೊಟ್ಟು ನ್ಯಾಯಾಲಯವನ್ನು ಎದುರಿಸಿ ಎಂದು ಆಗ್ರಹಿಸಿದರು. ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಬೇರೆಡೆ ವರ್ಗಾಯಿಸಿದ್ದರ ವಿರುದ್ಧ ಕಳೆದ ವರ್ಷ ಪ್ರತಿಭಟನೆ ಮಾಡಿದ್ದೆವು. ಒಂದು ವರ್ಷದ ಬಳಿಕ ನಮ್ಮ ವಿರುದ್ಧ ಎಫ್ಐಆರ್ ಹಾಕಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ವಿವರ ನೀಡಿದರು.