Publish Date: Wed, 02 Oct 2024 (12:37 IST)
Updated Date: Wed, 02 Oct 2024 (13:26 IST)
ಬೆಂಗಳೂರು: ಇಂದು ವಿಧಾನಸೌಧದ ಮುಂಭಾಗ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಶಲ್ಯಕ್ಕೆ ಬೆಂಕಿ ತಗುಲಿ ಅನಾಹುತ ಸಂಭವಿಸುವುದರಲ್ಲಿತ್ತು. ಇದು ಸಂಕಷ್ಟದ ಸೂಚನೆಯಾ ಎಂಬ ಅನುಮಾನ ಮೂಡಿದೆ.
ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಶಾಸಕ, ಸಚಿವರುಗಳೊಂದಿಗೆ ಕಿತ್ತೂರು ಉತ್ಸವದಲ್ಲಿ ಭಾಗಿಯಾದ ಸಿಎಂ ದೀಪ ಬೆಳಗಿದ್ದಾರೆ. ಆದರೆ ಅಷ್ಟರಲ್ಲಿ ಅವರ ಶಲ್ಯ ದೀಪಕ್ಕೆ ತಗುಲಿ ಬೆಂಕಿ ಹತ್ತಿಕೊಂಡಿದೆ. ಅದೃಷ್ಟವಶಾತ್ ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಂದಿದೆ.
ತಕ್ಷಣವೇ ಅವರು ಬೆಂಕಿ ನಂದಿಸಿದ್ದಾರೆ. ಶಲ್ಯಕ್ಕೆ ಬೆಂಕಿ ತಗುಲಿದ್ದರಿಂದ ಅರೆಕ್ಷಣ ಸ್ವತಃ ಸಿದ್ದರಾಮಯ್ಯ ಕೊಂಚ ಗಲಿಬಿಲಿಯಾದರು. ಬಳಿಕ ಸಾವರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ ಎನ್ನಬಹುದು.
ಇದೀಗ ಮುಡಾಹಗರಣ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ. ಇನ್ನೊಂದೆಡೆ ವಿಪಕ್ಷಗಳು ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಕಳಂಕವೇ ಇಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯಗೆ ಈಗ ಒಂದಾದ ಮೇಲೊಂದರಂತೆ ಎದುರಾಗುತ್ತಿರುವ ಸಂಕಷ್ಟಗಳ ಸೂಚನೆಯಾ ಇದು ಎಂಬ ಅನುಮಾನ ಮೂಡಿದೆ.