Publish Date: Sun, 30 Sep 2018 (19:58 IST)
Updated Date: Sun, 30 Sep 2018 (20:00 IST)
ಶೌಚಾಲಯವೇ ಇಲ್ಲದ ಕಟ್ಟಡವನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿರುವುದು ಕಾಂಗ್ರೆಸ್ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ದೂರಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವೃತ್ತಿಪರ ಹಾಗೂ ವಿಭಜನೆ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಶಾಸಕಿ ರೂಪಾಲಿ ನಾಯ್ಕ, ವಸತಿ ನಿಲಯದ ಸ್ಥಿತಿ ನೋಡಿ ಕಿಡಿಕಾರಿದರು. ಕಟ್ಟಡ ಪೂರ್ಣವಾಗಿ ಒಂದು ವರ್ಷವಾದರೂ ವಿದ್ಯಾರ್ಥಿಗಳ ವಾಸಕ್ಕೆ ಇನ್ನೂ ತೆರವು ಮಾಡಿಲ್ಲ. ಅಲ್ಲದೆ ಇಷ್ಟು ದೊಡ್ಡ ಕಟ್ಟಡಕ್ಕೆ ಶೌಚಾಲಯದ ವ್ಯವಸ್ಥೆಯೇ ಇಲ್ಲ. ಅಂತಹ ಕಟ್ಟಡವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೇಗೆ ಉದ್ಘಾಟಿಸಿದರು ತಿಳಿಯುತ್ತಿಲ್ಲ ಎಂದರು.
ಮುಖ್ಯಮಂತ್ರಿಗಳು ಇದರ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಐದು ಕೋಟಿಯ ಕಾಮಗಾರಿಯನ್ನು ಹಿಂದಿನ ಸರಕಾರ ಯಾರಿಗೆ ನೀಡಿದೆ. ಅದರಿಂದ ಆಗಿರುವ ತೊಂದರೆಗಳ ಬಗ್ಗೆ ಗಮನ ಹರಿಸಬೇಕು ಎಂದರು. ಒಳ್ಳೆಯ ವಿದ್ಯಾಭ್ಯಾಸ ವಸತಿ ಸೌಲಭ್ಯವಿದೆ ಎಂದು ದೂರದ ಊರಿಂದ ಬರುವ ವಿದ್ಯಾರ್ಥಿಗಳ ಪಾಡು ನಿಮಗೆ ಕಾಣಿಸದಾಗಿದೆಯಾ ಎಂದು ಶಾಸಕಿ ಪ್ರಶ್ನಿಸಿದ್ದಾರೆ. ಹಳೆಯ ಕಟ್ಟಡದ ನೀರಿನ ತೊಟ್ಟಿಯನ್ನು ಮೂರು ವರ್ಷಗಳಾದರೂ ಬದಲಿಸಿಲ್ಲ. ಜಿಲ್ಲಾಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಾಕೆ ಈ ತರಹದ ಕೆಲಸ ಮಾಡಿದೆ ತಿಳಿಯುತ್ತಿಲ್ಲ ಎಂದು ದೂರಿದರು.