ಬೆಂಗಳೂರು: ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತ ಭೀತಿಯಿಂದ ಮಂಗಳೂರು, ಬೆಂಗಳೂರು ನಡುವೆ ಮತ್ತೆ ಪ್ರಯಾಣಕ್ಕೆ ತೊಂದರೆ ಎದುರಾಗಿದೆ. ಪ್ರತೀ ವರ್ಷದ ಸಮಸ್ಯೆ ಈ ವರ್ಷವೂ ಎದುರಾಗಿದೆ.
ಮಳೆಗಾಲ ಬಂತೆಂದರೆ ಕರಾವಳಿ ನಗರಕ್ಕೆ ಬೆಂಗಳೂರಿನಿಂದ ತೆರಳುವುದೇ ದೊಡ್ಡ ತಲೆನೋವು. ಯಾವಾಗ ಗುಡ್ಡು ಕುಸಿತವಾಗುತ್ತದೆ, ಯಾವಾಗ ರಸ್ತೆ ಬ್ಲಾಕ್ ಆಗುತ್ತದೆ ಎಂದು ಹೇಳಲಾಗದು. ಇದೀಗ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿರಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತವಾಗುತ್ತಿದೆ.
ಶಿರಾಡಿ ಘಾಟಿಯಲ್ಲಿ ಈ ಬಾರಿ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯವೂ ನಡೆಯುತ್ತಿರುವುದರಿಂದ ಗುಡ್ಡ ಕುಸಿತದ ಭೀತು ಹೆಚ್ಚಾಗಿದೆ. ರಸ್ತೆ ಕಾಮಗಾರಿ ಕಾರ್ಯ ಸಂಪೂರ್ಣವಾಗಿಲ್ಲ. ಹೀಗಾಗಿ ಬೃಹದಾಕಾರದ ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಇದರಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವುದೇ ಅಪಾಯಕಾರಿಯಾಗಿದೆ. ಶಿರಾಡಿ ಘಾಟಿ ಮಾರ್ಗವಾಗಿ ಸಂಚಾರ ಮಾಡುವಾಗ ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚಾರ ಮಾಡಬೇಕಾಗಿದೆ. ಮಳೆಗಾಲದ ವೇಳೆ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೆ ಈ ಸಮಸ್ಯೆಯಿರುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.