Publish Date: Thu, 12 Sep 2019 (19:10 IST)
Updated Date: Thu, 12 Sep 2019 (19:15 IST)
ಸಂಚಾರಿ ನಿಯಮ ಪಾಲನೆ ಮಾಡಿ ಎಂದು ಸರ್ಕಾರ ಹೊಸ ಹೊಸ ಯೋಜನೆಗಳನ್ನು ತಂದು ನಿಯಮ ಪಾಲನೆ ಮಾಡದೇ ಇರುವವರಿಗೆ ಹೆಚ್ಚು ದಂಡ ವಿಧಿಸುವ ಎಚ್ಚರಿಕೆಯನ್ನ ವಾಹನ ಸವಾರರಿಗೆ ನೀಡುತ್ತಿದ್ರೆ ಇಲ್ಲೋರ್ವ ಅಧಿಕಾರಿ ಎಡವಟ್ಟಾಗಿ ಮಾಡುತ್ತಿದ್ದಾನೆ.
ಚಾಲನ ತರಬೇತಿಗೆ ಬಂದವರಿಗೆ ಸಂಚಾರಿ ನಿಯಮ ಹೇಳಿಕೊಟ್ಟು ವಾಹನ ಚಾಲನ ಕೌಶಲ್ಯವನ್ನು ಪರೀಕ್ಷಿಸುವ ಇನ್ಸ್ಪೆಕ್ಟರ್ ಸಂಚಾರಿ ನಿಯಮವನ್ನು ಮರೆತು ಬೆಳ್ಳಂಬೆಳಿಗ್ಗೆ ಕಂಠ ಪೂರ್ತಿ ಕುಡಿದು ವಾಹನ ಚಾಲನೆ ಮಾಡಿ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಈತನನ್ನ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೀಗೆ ನಿಲ್ಲಲು ಆಗದೆ ಕಂಠ ಪೂರ್ತಿ ಕುಡಿದು ತೂರಾಡಿಕೊಂಡು ಅಡ್ಡಾದಿಡ್ಡಿ ಕಾರು ಚಲಾವಣೆ ಮಾಡಿ ಆಟೋಗೆ ಡಿಕ್ಕಿ ಹೊಡೆದಿರೋ ಅಧಿಕಾರಿಯ ಹೆಸರು ಮಂಜುನಾಥ್ . ಈತ ಬೆಂಗಳೂರಿನ ಆನೇಕಲ್ ಸಮೀಪದ ಮರಸೂರು ಬಳಿಯ ಕೆ.ಎ.59 ಹಾಗೂ ದೇವರಚಿಕ್ಕನಹಳ್ಳಿಯ ಕೆಎ 51 ರ ಆರ್.ಟಿ.ಓ ಕಛೇರಿಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಬೆಳಿಗ್ಗೆ ಎಲೆಕ್ಟ್ರಾನಿಕ್ ಸಿಟಿಯ ಟಿಸಿಸ್ ಕಂಪನಿಯ ಮುಂದೆ ಕುಡಿದು ಕಾರು ಚಲಾಯಿಸಿ ಆಟೋಗೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಆಟೋ ಜಖಂಗೊಂಡಿದ್ದು ಆಟೋ ಚಾಲಕ ಸೈಯದ್ ಇಮ್ರಾನ್ ಕೈ ಮುರಿದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಅಲ್ಲಿದ್ದ ಸಾರ್ವಜನಿಕರು ಮಂಜುನಾಥರನ್ನು ಕಾರಿನಿಂದ ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡರು. ಸದ್ಯ ಮಂಜುನಾಥ್'ರನ್ನು ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.